ನವದೆಹಲಿ : ಬಾಂಗ್ಲಾದ ರಾಜಧಾನಿ ಢಾಕಾದಲ್ಲಿ 20 ಜನ ವಿದೇಶಿಯರ ಧಾರುಣ ಸಾವಿಗೆ ಕಾರಣವಾದ ಉಗ್ರರ ದಾಳಿಯ ಪ್ರಚೋದನೆಗೆ ಡಾ.ಝಾಕೀರ್ ನಾಯ್ಕ್ ಭಾಷಣ, ಸಿಡಿಗಳು ಕಾರಣ ಎಂಬ ವರದಿ ಹಿನ್ನಲೆಯಲ್ಲಿ ನಾಯ್ಕ್ ಭಾಷಣಗಳನ್ನು ಪರಿಶೀಲನೆ ನಡೆಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೂಚನೆ ನಿಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಯಾವುದೇ ಬೆಲೆ ತೆತ್ತರೂ ಸರಿ ಭಯೋತ್ಪಾದನೆ ಜೊತೆಗೆ ಭಾರತ ಸರ್ಕಾರವು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಝಾಕೀರ್ ನಾಯ್ಕ್ ಭಾಷಣಗಳನ್ನು ನಾವು ಗಮನಕ್ಕೆ ತೆಗೆದುಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಢಾಕಾದ ಹೋಲಿ ಆರ್ಟಿಸನ್ ಬೇಕರಿ ಮೇಲೆ ದಾಳಿ ನಡೆಸಿದ್ದ ಐವರು ಉಗ್ರರು 20 ಮಂದಿಯ ಕತ್ತು ಕೊಯ್ದು ಹತ್ಯೆಗೈದಿದ್ದ ಘಟನೆ ಬೆನ್ನಲ್ಲೇ ಇವರೆಲ್ಲರೂ ಮುಂಬೈ ಮೂಲದ ಧರ್ಮ ಪ್ರಚಾರಕ ಝಾಕೀರ್ ನಾಯ್ಕ್ ನ ಬೋಧನೆಯಿಂದ ಪ್ರಭಾವಿತರಾಗಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಆ ಹಿನ್ನೆಲೆಯಲ್ಲಿ ಇದೀಗ ರಾಷ್ಟ್ರೀಯ ತನಿಖಾ ದಳ(ಎನ್ ಐಎ) ಝಾಕೀರ್ ನಾಯ್ಕ್ ನ ಭಾಷಣಗಳನ್ನು ಪರಿಶೀಲಿಸುತ್ತಿದೆ.
ಪೀಸ್ ಟೀವಿಯ ಇಸ್ಲಾಂ ಧರ್ಮ ಪ್ರಚಾರಕ 50ರ ವರ್ಷದ ನಾಯ್ಕ್ ,ಐಸಿಸ್ ಉಗ್ರ ಸಂಘಟನೆಯು ಇಸ್ಲಾಂ ವಿರೋಧಿ "ಇಸ್ಲಾಮಿಕ್ ಸ್ಟೇಟ್ ಎನ್ನುವ ಪದ ಸಮೂಹವೇ ಇಸ್ಲಾಂ ವಿರೋಧಿಯಾಗಿದೆ ಎಂದು ಹೇಳಿದ್ದರು.
ಇಸ್ಲಾಮಿಕ್ ಸ್ಟೇಟ್ ಎನ್ನುವ ಹೆಸರನ್ನು ಬಳಸುವ ಮೂಲಕ ನಾವು ಇಸ್ಲಾಂ ಧರ್ಮವನ್ನೇ ಖಂಡಿಸಿದಂತಾಗುತ್ತದೆ. ಅವರು ಇರಾಕ್ ಮತ್ತು ಸಿರಿಯಾದ ಇಸ್ಲಾಂ ವಿರೋಧಿಗಳಾಗಿದ್ದಾರೆ ಮತ್ತು ಅಮಾಯಕ ವಿದೇಶೀಯರನ್ನು ಕೊಂದವರಾಗಿದ್ದಾರೆ. ಇಸ್ಲಾಂ ವಿರೋಧಿಗಳೇ ಇವರಿಗೆ ಈ ಹೆಸರನ್ನು ಕೊಟ್ಟಿರುತ್ತಾರೆ' ಎಂದು ನಾಯ್ಕ್ ಹೇಳಿದ್ದರು.
ಎಲ್ಲಾ ಮುಸ್ಲಿಮರು ಭಯೋತ್ಪಾದಕರಾಗಬೇಕೆಂದು ಕರೆ ನೀಡಿದ್ದ ಝಾಕೀರ್ ಸಂದೇಶವನ್ನು ಢಾಕಾದಲ್ಲಿ ಹತನಾದ ಉಗ್ರರಲ್ಲಿ ಒಬ್ಬನಾದ ಅವಾಮಿ ಲೀಗ್ ನಾಯಕನ ಮಗ ರೋಹನ್ ಇಮ್ತಿಯಾಜ್ ಕಳೆದ ವರ್ಷ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಿರುವುದಾಗಿ ಕೆಲ ವರದಿಗಳು ತಿಳಿಸಿವೆ.