ಢಾಕಾ : ಬಾಂಗ್ಲಾದೇಶದ ರಾಜಧಾನಿ ಢಾಕಾ ಕೆಫೆಯಲ್ಲಿ ನಡೆದ ಉಗ್ರರ ದಾಳಿ ಪ್ರಕರಣದ ಮಾಸ್ಟರ್ ಮೈಂಡ್ ಸೇರಿದಂತೆ ನಾಲ್ವರು ಉಗ್ರರನ್ನು ಬಾಂಗ್ಲಾ ಪೊಲೀಸರು ಎನ್ ಕೌಂಟರ್ ನಲ್ಲಿ ಹತ್ಯೆಗೈದಿರುವುದಾಗಿ ತಿಳಿದುಬಂದಿದೆ.
ಢಾಕಾದ ಹೊರವಲಯವಾದ ನಾರಾಯಣ್ ಗಂಜ್ ನಲ್ಲಿ ಉಗ್ರರು ಅಡಗಿದ್ದ ಖಚಿತ ಮಾಹಿತಿ ಮೇರೆಗೆ ಬಾಂಗ್ಲಾ ಪೊಲೀಸರು ದಾಳಿ ನಡೆಸಿದ್ದರು. ಈ ಎನ್ ಕೌಂಟರ್ ನಲ್ಲಿ ಢಾಕಾ ಕೆಫೆ ದಾಳಿ ಮಾಸ್ಟರ್ ಮೈಂಡ್ ತಮೀಮ್ ಅಹ್ಮದ್ ಚೌಧುರಿ ಸೇರಿದಂತೆ ನಾಲ್ವರು ಉಗ್ರರು ಹತರಾಗಿದ್ದಾರೆ.
ಬಾಂಗ್ಲಾದಲ್ಲಿ ಜನಿಸಿದ್ದ ತಮೀಮ್ ಕೆನಡಾ ಪ್ರಜೆಯಾಗಿದ್ದ. ಸುಮಾರು 3 ವರ್ಷದ ಹಿಂದೆ ತಮೀಮ್ ಕೆನಡಾದಿಂದ ಬಾಂಗ್ಲಾದೇಶಕ್ಕೆ ವಾಪಸ್ ಆಗಿದ್ದ. ಈತ ಯುವ ಮುಸ್ಲಿಂ ತೀವ್ರಗಾಮಿಗಳಿಗೆ ಹಣಕಾಸಿನ ನೆರವು ನೀಡುತ್ತಿದ್ದ ಎನ್ನಲಾಗಿದೆ
ಕಳೆದ ತಿಂಗಳು ಢಾಕಾದ ಹೋಲಿ ಆರ್ಟೀಸನ್ ಬೇಕರಿ ಮೇಲೆ ಐಸಿಸ್ ಗೆ ಸೇರಿದ್ದ ಉಗ್ರರು ಭಾರತೀಯ ಯುವತಿ ಸೇರಿದಂತೆ 22 ಮಂದಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿದ್ದರು.