ಕೋಲ್ಕತ್ತ : ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ಆರಂಭವಾಗಿದ್ದು, ಒಟ್ಟು 1.08 ಕೋಟಿ ಮತದಾರು ತಮ್ಮ ಹಕ್ಕನ್ನು ಚಲಾವಣೆ ಮಾಡಲಿದ್ದಾರೆ.
ಪಶ್ಚಿಮ ಬಂಗಾಳದ ಹಲವು ಆಡಳಿತಾ ರೂಢ ತೃಣಮೂಲ ಕಾಂಗ್ರೆಸ್ ನ ಹಲವು ಶಾಸಕರು ಸೇರಿದಂತೆ ವಿವಿಧ ರಾಜಕೀಯ ಘಟಾನುಘಟಿ ನಾಯಕರ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ವಿಧಾನಸಭೆ ಚುನಾವಣೆಯ ನಿರ್ಣಾಯಕ ಹಂತದ ಮತದಾನ ಎಂದೇ ಇದನ್ನು ಬಿಂಬಸಲಾಗುತ್ತಿದೆ.
ನಾಲ್ಕನೇ ಹಂತದ ಮತದಾನದ ವೇಳೆ ಒಟ್ಟು 49 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, 24 ಪರಗಣ, ಬಿಧಾನ್ ನಗರ, ಹೌವ್ರಾ ಜಿಲ್ಲೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಮತದಾನಕ್ಕಾಗಿ ಕೇಂದ್ರ ಚುನಾವಣಾ ಆಯೋಗ ಒಟ್ಟು 12, 500 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಒಟ್ಟು 1.08 ಕೋಟಿ ಮತದಾರರು 345 ಅಭ್ಯರ್ಥಿಗಳ ಹಣೆಬರಹ ನಿರ್ಧಾರಿಸಲಿದ್ದಾರೆ.
ಆಡಳಿತಾರೂಢ ಟಿಎಂಸಿಯ ಸಚಿವರಾದ ಅಮಿತ್ ಮಿತ್ರಾ, ಪುರ್ನೆಂಡು ಬಸು, ಚಂದ್ರಿಮಾ ಭಟ್ಟಾಚಾರ್ಯಾ, ಬ್ರಾತ್ಯ ಬಸು, ಜ್ಯೋತಿಪ್ರಿಯೋ ಮುಲ್ಲಿಕ್ ಮತ್ತು ಅರೂಪ್ ರಾಯ್ ಅವರ ಭವಿಷ್ಯ ಕೂಡ ನಿರ್ಧಾರವಾಗಲಿದೆ.
ಇನ್ನು ಮೂರನೇ ಹಂತದ ಮತದಾನದ ವೇಳೆ ಸಿಪಿಐ (ಎಂ) ಕಾರ್ಯಕರ್ತನ ಕೊಲೆಯಾದ್ದರಿಂದ ಉಂಟಾಗಿದ್ದ ಘರ್ಷಣೆಯ ಹಿನ್ನಲೆಯಲ್ಲಿ ನಾಲ್ಕನೇ ಹಂತದ ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ ಅಭೂತ ಪೂರ್ವ ಭದ್ರತೆ ಏರ್ಪಡಿಸಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ವ್ಯಾಪಕ ಭದ್ರತೆ ಒದಗಿಸಲಾಗಿದ್ದು, ತುರ್ತು ಪ್ರಹಾರ ದಳ, ಅಶ್ರುವಾಯ ದಳ ಮತ್ತು ಕೇಂದ್ರೀಯ ಮೀಸಲು ಪಡೆಯ ತುಕಡಿಗಳು ಸೇರಿದಂತೆ ಒಟ್ಟು 22 ಸಾವಿರ ಭದ್ರತಾ ಸಿಬ್ಬಂದಿಗಳನ್ನು ಮತದಾನಕ್ಕಾಗಿ ನಿಯೋಜಿಸಲಾಗಿದೆ.