ನವದೆಹಲಿ : ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಮತದಾನ ಆರಂಭವಾಗಿದೆ. ಬೆಳಗ್ಗೆ 9 ಗಂಟೆಯಿಂದ ಆರಂಭವಾದ ಮತದಾನ ಸಂಜೆ 4 ಗಂಟೆಯವರೆಗೆ ನಡೆಯಲಿದ್ದು, ಸಾಯಂಕಾಲ 5 ಗಂಟೆಯ ನಂತರ ಫಲಿತಾಂಶ ಹೊರಬೀಳಲಿದೆ.
ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಐವರು ಕಣದಲ್ಲಿದ್ದಾರೆ. ಕಾಂಗ್ರೆಸ್ ನಿಂದ ಕೇಂದ್ರದ ಮಾಜಿ ಸಚಿವರಾದ ಆಸ್ಕರ್ ಫೆರ್ನಾಂಡಿಸ್, ಜೈರಾಮ್ ರಮೇಶ್ ಹಾಗೂ ಮಾಜಿ ಪೊಲೀಸ್ ಅಧಿಕಾರಿ ಕೆ.ಸಿ.ರಾಮಮೂರ್ತಿ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಕೇಂದ್ರ ವಾಣಿಜ್ಯ ಖಾತೆ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪರ್ಧಿಸಿದ್ದಾರೆ. ಜೆಡಿಎಸ್ ನಿಂದ ಉದ್ಯಮಿ ಬಿ.ಎಂ.ಫಾರೂಕ್ ಕಣದಲ್ಲಿದ್ದಾರೆ.
ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಫಲಿತಾಂಶ ಹೊರಬಿದ್ದಿದ್ದು, ರಾಜ್ಯಸಭೆಯಲ್ಲೂ ಇದೇ ಫಲಿತಾಂಶ ಮರುಕಳಿಸುವ ಸಾಧ್ಯತೆಯಿದೆ.
ಬಿಜೆಪಿಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ನಿಂದ ಕೇಂದ್ರದ ಮಾಜಿ ಸಚಿವರಾದ ಜೈರಾಂ ರಮೇಶ್, ಆಸ್ಕರ್ ಫರ್ನಾಂಡಿಸ್ ಗೆಲುವು ನಿಶ್ಚಿತ. ನಾಲ್ಕನೇ ಸ್ಥಾನಕ್ಕೆ ಕಾಂಗ್ರೆಸ್ನಿಂದ ಕೆ.ಸಿ.ರಾಮಮೂರ್ತಿ, ಜೆಡಿಎಸ್ನಿಂದ ಬಿ.ಎಂ. ಫಾರೂಕ್ ಸ್ಪರ್ಧಿಸಿದ್ದಾರೆ. ಆದರೆ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಭಿನ್ನಮತೀಯರು ಅಡ್ಡಮತ ಹಾಕಿರುವುದರಿಂದ ಇವರ ಜತೆ ಪಕ್ಷೇತರ ಶಾಸಕರ ನೆರವಿನಿಂದ ರಾಮಮೂರ್ತಿ ಗೆಲುವು ಬಹುತೇಕ ನಿಶ್ಚಿತವಾಗಿದೆ.
ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿಗಳಾದ ಜೈರಾಂ ರಮೇಶ್ ಹಾಗೂ ಆಸ್ಕರ್ ಫರ್ನಾಂಡಿಸ್ ಅವರಿಗೆ ತಲಾ 47 ಮತ ವಿಂಗಡಿಸಲು ಕಾಂಗ್ರೆಸ್ ವರಿಷ್ಠರು ನಿರ್ಧರಿಸಿದ್ದಾರೆ. ಇದಾದ ಬಳಿಕ ಕಾಂಗ್ರೆಸ್ನಲ್ಲಿ ಇನ್ನೂ 30 ಖಾತ್ರಿ ಮತಗಳು ಉಳಿದುಕೊಳ್ಳಲಿವೆ. ಪಕ್ಷೇತರರು ಹಾಗೂ 5 ಜೆಡಿಎಸ್ ಭಿನ್ನಮತೀಯರ ಬೆಂಬಲ ಹೊಂದಿರುವ ಕಾಂಗ್ರೆಸ್ಗೆ ಮೂರನೇ ಅಭ್ಯರ್ಥಿಯ ಗೆಲುವು ಕೂಡ ಸುಲಭವಾಗಲಿದೆ.
ಪಕ್ಷೇತರರ ಪೈಕಿ 2-3 ಶಾಸಕರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವ ಸಾಧ್ಯತೆಯಿದೆ. ಉಳಿದಂತೆ ಕನಿಷ್ಠ 13 ಪಕ್ಷೇತರರು ಹಾಗೂ 5 ಜೆಡಿಎಸ್ ಭಿನ್ನಮತೀಯ ಶಾಸಕರ ಬೆಂಬಲವನ್ನು ಕಾಂಗ್ರೆಸ್ ಹೊಂದಿದೆ. ಇದರಿಂದ ಕಾಂಗ್ರೆಸ್ನ ಮೂರನೇ ಅಭ್ಯರ್ಥಿಗೆ 48 ಮತ ಪಡೆಯುವ ಅವಕಾಶವಿದೆ. ಕೊನೆಯ ಹಂತದಲ್ಲಿ ಜೆಡಿಎಸ್ ನಾಯಕರ ಕಸರತ್ತು ಫಲ ಕೊಡದಿದ್ದರೆ ಈ ಮತ ಹಂಚಿಕೆಯೇ ಅಂತಿಮವಾಗಲಿದೆ.