ನಾಸಿಕ್ : ಭಾರತ ಮಾತಾ ಕೀ ಜೈ ಘೋಷಣೆ ವಿವಾದವು ತಾರಕಕ್ಕೇರುವ ನಡುವೆಯೇ, ಈ ಜಯಘೋಷ ಹೇಳದವರಿಗೆ ದೇಶದಲ್ಲಿ ಇರಲು ಹಕ್ಕಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ಹಾಗೂ ಮುಸ್ಲಿಂ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ರಾಜ್ಯ ಮಟ್ಟದ ಕಾರ್ಯಕಾರಿ ಸಭೆಯ ನಿಮಿತ್ತ ಆಯೋಜಿಸಿದ್ದ ಸಂವಾದ ಯಾತ್ರೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಮಾತಾ ಕೀ ಜೈ ಈ ಘೋಷಣೆ ಯಾವುದೇ ಒಂದು ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಭಾರತ ಮಾತಾ ಕೀ ಜೈ ಅನ್ನದಿರುವವರಿಗೆ ಈ ದೇಶದಲ್ಲಿ ಇರುವ ಅಧಿಕಾರ ಇಲ್ಲ. ಒಂದು ವೇಳೆ ಈ ದೇಶದಲ್ಲಿ ಇರಬೇಕೆಂದರೆ ಭಾರತ ಮಾತಾ ಕೀ ಜೈ ಅನ್ನಲೇಬೇಕು' ಎಂದು ಗುಡುಗಿದರು.
ಅಲ್ಲದೆ, ಇತ್ತೀಚೆಗೆ ದೇಶದ್ರೋಹ ಪ್ರಕರಣದಲ್ಲಿ ಸಿಲುಕಿರುವ ಕೆಲವರನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬೆಂಬಲಿಸಿರುವುದನ್ನು ಟೀಕಿಸಿದ ಫಡ್ನವೀಸ್, ಬಿಜೆಪಿಯನ್ನು ವಿರೋಧಿಸಿ. ಸಹಿಸಿಕೊಳ್ಳುತ್ತೇವೆ. ಆದರೆ ಭಾರತ ಮಾತೆ ಘೋಷಣೆಯನ್ನು ವಿರೋಧಿಸಿದರೆ ದೇಶದ ಜನರು ಅದನ್ನು ಸಹಿಸಲ್ಲ ಎಂದರು.
ಜನರಿಗೆ ಪ್ರಜಾಸತ್ತಾತ್ಮಕ ದೇಶದಲ್ಲಿ ಯಾವುದನ್ನು ಹೇಳಬೇಕು, ಹೇಳಬಾರದು ಎಂಬ ಅಧಿಕಾರವಿದೆ. ಇಂಥದ್ದೇ ಹೇಳಿ ಎಂದು ಬಿಜೆಪಿ, ಆರ್.ಎಸ್.ಎಸ್ ನವರು ಒತ್ತಡ ಹೇರಿದರೆ ಅದು ಅವರಿಗೇ ತಿರುಗುಬಾಣವಾಗಲಿದೆ ಎಂದು ಫಡ್ನವೀಸ್ ಹೇಳಿಕೆಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಅನೇಕ ಮುಸ್ಲಿಂ ಮೌಲ್ವಿಗಳು ಕೂಡ ಸಿಎಂ ಹೇಳಿಕೆಯನ್ನು ಖಂಡಿಸಿವೆ.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಫಡ್ನವೀಸ್, 50 ನಿಮಿಷದ ಭಾಷಣದಲ್ಲಿ ಭಾರತ ಮಾತಾ ಕೀ ಜೈ ವಿವಾದ ಮತ್ತು ಮಹಿಳೆಯರ ದೇಗುಲ ಪ್ರವೇಶ ವಿವಾದದ ಬಗ್ಗೆ ಕೇವಲ 5 ನಿಮಿಷ ಮಾತನಾಡಿದೆ. ಇದರಲ್ಲಿನ ಆಯ್ದ ಭಾಗಗಳನ್ನಷ್ಟೇ ವರದಿ ಮಾಡಿ ಋಣಾತ್ಮಕ ವರದಿಗಾರಿಕೆ ಮಾಡಿವೆ. ತುಷ್ಟೀಕರಣ ರಾಜಕೀಯಕ್ಕೂ ಒಂದು ಮಿತಿ ಇದೆ ಎಂಬ ಅರ್ಥದಲ್ಲಿ ನಾನು ಮಾತನಾಡಿದ್ದೆ' ಎಂದು ಸ್ಪಷ್ಟನೆ ನೀಡಿದ್ದಾರೆ.