ಮುಂಬೈ : ಟ್ರಾಫಿಕ್ ಪೊಲೀಸ್ ಪೇದೆಯೊಬ್ಬ ಮಹರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕಾರಿನ ಹಿಂಬದಿಯಲ್ಲಿ ಬರುತ್ತಿದ್ದ ವಾಹನಗಳನ್ನು ಅನಗತ್ಯವಾಗಿ ತಡೆದು ಸುದ್ದಿಯಾದ ಬಳಿಕ ಘಟನೆಯ ಕುರಿತು ಸ್ವತಃ ಫಡ್ನವೀಸ್ ಅವರೇ ಕ್ಷಮೆ ಯಾಚಿಸಿದ್ದು, ನನಗೆ ವಿಐಪಿ ಸಂಸ್ಕೃತಿಯಲ್ಲಿ ನಂಬಿಕೆ ಇಲ್ಲ ಎಂದಿದ್ದಾರೆ.
ಎನ್ ಎಸ್ ಸಿಐ ಕ್ಲಬ್ನ ಕಾರ್ಯಕ್ರಮಕ್ಕೆ ಫಡ್ನವೀಸ್ ಅಗಮಿಸಿದ್ದ ವೇಳೆ ಟ್ರಾಫಿಕ್ ಪೊಲೀಸ್ ಪೇದೆ ಸಾರ್ವಜನಿಕರ ವಾಹನಗಳನ್ನು ತಡೆ ಹಿಡಿದಿದ್ದು ಮಾತ್ರವಲ್ಲದೆ ಕ್ಲಬ್ನ ಸದಸ್ಯರ ವಾಹನಗಳನ್ನು ಒಳಬಿಡದೆ ವಿವಾದಕ್ಕೆ ಕಾರಣರಾಗಿದ್ದರು.
'ನಾನು ವಿಐಪಿ ಸಂಸ್ಕೃತಿಯನ್ನು ಬಯಸುವುದಿಲ್ಲ, ಸಾರ್ವಜನಿಕರಿಗೆ ಆದ ತೊಂದರೆಯ ಕುರಿತು ಕ್ಷಮೆ ಯಾಚಿಸುತ್ತೇನೆ. ಎನ್ ಎಸ್ ಸಿಐ ಘಟನೆ ಬಗ್ಗೆ ವಿವರ ಕೇಳುತ್ತೇನೆ ಅಲ್ಲದೆ ಪೊಲೀಸರು ಅನಗತ್ಯವಾಗಿ ಸಾರ್ವಜನಿಕರನ್ನು ತಡೆದು ತೊಂದರೆ ನೀಡಬಾರದು' ಎಂದು ಫಡ್ನವೀಸ್ ಟ್ವೀಟ್ ಮಾಡಿದ್ದಾರೆ.