Sullia : ಸುಳ್ಯದ ಸ್ನೇಹ ಶಾಲೆಯ ಬಯಲು ಸೂರ್ಯಾಲಯದಲ್ಲಿ ಮಂಗಳೂರಿನ ಯೋಗರತ್ನ ದೇಲಂಪಾಡಿ ಗೋಪಾಲಕೃಷ್ಣ ಇವರು ಮೀನ ಸಂಕ್ರಮಣದ ಯೋಗ ಶಿಬಿರವನ್ನು ನಡೆಸಿಕೊಟ್ಟರು. ಪ್ರತಿ ಸಂಕ್ರಮಣಕ್ಕೆ ಹೊಂದಿಕೊಂಡು ತಿಂಗಳ ಎರಡನೇ ಆದಿತ್ಯವಾರ ಇಲ್ಲಿ ಶಿಬಿರ ನಡೆಸಲಾಗುತ್ತದೆ.
ಪ್ರಸ್ತುತ ಶಿಬಿರದಲ್ಲಿ ಅವರು ಯೋಗಾಸನಗಳು, ಯೋಗಮುದ್ರೆಗಳು, ವರ್ಣಚಿಕಿತ್ಸೆ ಹಾಗೂ ಚಕ್ರಧ್ಯಾನದ ಬಗ್ಗೆ ಮಾಹಿತಿ ನೀಡಿದರು. ಮಂಗಳೂರಿನ ಯೋಗ ಅಭ್ಯಾಸಿಗಳು ಹಾಗೂ ಸುಳ್ಯದ ಸಾರ್ವಜನಿಕರೂ ಸೇರಿದಂತೆ ಸುಮಾರು 75 ಮಂದಿ ಭಾಗವಹಿಸಿ ಪ್ರಯೋಜನ ಪಡೆದರು.
ಪರಿವಾರಕಾನದ ಶ್ರೀಮತಿ ದೇವಕಿಯವರು ಯೋಗದಿಂದ ತಾನು ಪಡೆದಿರುವ ಲಾಭವನ್ನು ತಿಳಿಸಿದರು. ಕಳೆದ ತಿಂಗಳಿನ ಶಿಬಿರದಲ್ಲಿ ಭಾಗವಹಿಸಿದ ಮಗಳಿಂದ ಯೋಗ ಕಲಿತು ನಿರಂತರ ಅಭ್ಯಾಸದಲ್ಲಿ ತೊಡಗಿದ ಫಲವಾಗಿ ತನ್ನ ಗಂಟು ನೋವುಗಳು ಪೂರ್ತಿ ಗುಣವಾಗಿರುವುದಾಗಿ ಹೇಳಿದರು. ಈವರೆಗೆ ತೆಗೆದುಕೊಳ್ಳುತ್ತಿದ್ದ ಮಾತ್ರೆಗಳನ್ನು ಬಿಟ್ಟಿದ್ದೇನೆ. ಯಾವುದೇ ಎಣ್ಣೆ ತಿಕ್ಕುವ ಅಗತ್ಯವಿಲ್ಲದೆ ಸುಖವಾಗಿದ್ದೇನೆ ಎಂದು ಹೇಳಿದರು.
ಶಿಬಿರವನ್ನು ಆಯೋಜಿಸಿದ್ದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಸ್ವಾಗತ ಮತ್ತು ವಂದನಾರ್ಪಣೆಯನ್ನು ನೆರವೇರಿಸಿದರು. ಮುಂದಿನ ಶಿಬಿರವನ್ನು ಎಪ್ರಿಲ್ 19 ರಂದು ನಡೆಸಲಾಗುವುದು ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.