Sullia : ಆಧುನಿಕ ಶಿಕ್ಷಣದಲ್ಲಿ ಕಂಪ್ಯೂಟರ್ ಕಲಿಕೆಗೆ ಬಹಳ ಮಹತ್ವವಿದೆ. ಆದ್ದರಿಂದ ಇನ್ಫೋಸಿಸ್ ಸಂಸ್ಥೆಯು ಶಾಲೆಗಳಿಗೆ ಕಂಪ್ಯೂಟರ್ಗಳ ಕೊಡುಗೆ ನೀಡುತ್ತಿದೆ. ನಾವು ಕಂಪ್ಯೂಟರನ್ನು ಸದುದ್ದೇಶಕ್ಕೂ ಬಳಸಬಹುದು ಅಥವಾ ದುರುಪಯೋಗಿಸಲೂ ಸಾಧ್ಯ. ಆದರೆ ಅದರ ಸದ್ಬಳಕೆ ಮಾಡುವ ಜಾಣ್ಮೆ ನಮ್ಮಲ್ಲಿರಬೇಕು ಎಂಬುದಾಗಿ ಸಂಸ್ಥೆಯ ಸೀನಿಯರ್ ಪ್ರೊಜೆಕ್ಟ್ ಮೇನೇಜರ್ ಭರತೇಶ್ ಬಂಗೇರರವರು ಹೇಳಿದರು.
ಅವರು ಇತ್ತೀಚಿಗೆ ಇನ್ಫೋಸಿಸ್ ಸಂಸ್ಥೆಯು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಗೆ ಕೊಡುಗೆಯಾಗಿ ನೀಡಿದ ಎಂಟು ಕಂಪ್ಯೂಟರ್ಗಳನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರಿಗೆ ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ನವೀಕರಣಗೊಳಿಸಿದ ಶಾಲಾ ದೃಶ್ಯ-ಶ್ರವಣ ಕೇಂದ್ರದ ಉದ್ಘಾಟನೆಯನ್ನು ಮಾಡಿದ ಸುರತ್ಕಲ್ ರೋಟರಿ ಅಧ್ಯಕ್ಷರಾದ ನಿವೃತ್ತ ಪ್ರಾಂಶುಪಾಲ ಪ್ರೊ. ರಾಜಮೋಹನ ರಾವ್ ಅವರು ಮಾತಾಡಿ ಉತ್ತಮ ನಾಗರಿಕರಾಗುವುದು ಸಂಸ್ಕಾರಯುತ ಶಿಕ್ಷಣದಿಂದ. ವಿದ್ಯಾರ್ಥಿ ಜೀವನದಲ್ಲಿ ನಾವು ಅನೇಕ ರೀತಿಯ ಸಂಪತ್ತುಗಳನ್ನು ಪಡೆಯುತ್ತೇವೆ. ಆದರೆ ನಾವು ಪ್ರೌಢರಾದ ಬಳಿಕ ಕಲಿತ ಶಾಲೆಗೆ ಮತ್ತು ಸಮಾಜಕ್ಕೆ ಕೊಡುಗೆಗಳನ್ನು ನೀಡಿ ಬದುಕಿನಲ್ಲಿ ಸಂತಸವನ್ನು ಕಾಣಬೇಕು. ಇರುವೆಗಳಿಂದ ಕೂಡಾ ನಾವು ಶೋಧನೆ, ಪರಿಶ್ರಮ, ಸಂಗ್ರಹ ಮತ್ತು ಶಿಸ್ತಿನ ಪಾಠವನ್ನು ಕಲಿಯಲು ಸಾಧ್ಯ. ಉತ್ತಮ ಕಲಿಕೆಗೆ ಪೂರಕವಾಗಿ ನಿರ್ಮಿಸಿದ ಈ ದೃಶ್ಯ ಶ್ರವಣ ಕೇಂದ್ರವನ್ನು ಸದ್ಬಳಕೆ ಮಾಡಿ ಎಂದು ಅವರು ಹೇಳಿದರು. ಮುಖ್ಯ ಅತಿಥಿಯಾಗಿ ಸುರತ್ಕಲ್ನ ಚಂದ್ರಕಾಂತ ಮರಾಠೆಯವರು ಭಾಗವಹಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಮಾತಾಡಿ ನಮ್ಮ ಬದುಕು ಹರಿಯುವ ನೀರಿನಂತೆ ಶುಭ್ರವಾಗಿರಬೇಕಾದರೆ ಕೊಡುಗೆಗಳನ್ನು ನೀಡುವ ಪ್ರವೃತ್ತಿ ಇರಬೇಕು. ಅದಕ್ಕೆ ಮಾದರಿಯಾಗಿ ಶಾಲೆಗಳಿಗೆ ನೀಡುವ ಇಂತಹ ದಾನಗಳ ಮೌಲ್ಯವನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಆರಂಭದಲ್ಲಿ ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯಾದ ಬಳಿಕ ಶಾಲಾ ಮುಖ್ಯೋಪಾಧ್ಯಾಯಿನಿಯವರು ಸ್ವಾಗತಿಸಿದರು. ಶಿಕ್ಷಕರಾದ ರಘುರಾಮ ಮತ್ತು ಪ್ರಸನ್ನ ಐವರ್ನಾಡುರವರು ಕಂಪ್ಯೂಟರ್ಗಳನ್ನು ಸಿದ್ಧಪಡಿಸಿದರು. ಶಿಕ್ಷಕಿ ಸವಿತಾ ಎಂ. ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕಿ ಕು. ದಿವ್ಯಾ ಕಾಳಮನೆ ವಂದನಾರ್ಪಣೆಗೈದರು.