Vijayanagar : ಎಲ್ಲೆಲ್ಲೂ ನಾವು ನಮ್ಮ ಸಂಸ್ಕೃತಿ-ನಮ್ಮ ಭಾರತವನ್ನು ಕಾಣಬೇಕು. ಎಲ್ಲಿಯವರೆಗೆ ನಮ್ಮ ನೆಲ ಹಾಗೂ ನಮ್ಮ ನೆಲೆಯನ್ನು ಮರೆಯೋದಿಲ್ವೋ ಅಲ್ಲಿಯವರೆಗೆ ಒಳಿತು ನಮ್ಮನ್ನು ಬಿಟ್ಟು ಹೋಗಲ್ಲ ಎಂದು ಶ್ರೀ ರಾಘವೇಶ್ವರಭಾರತಿ ಸ್ವಾಮೀಜಿ ಅವರು ಹೇಳಿದರು.
ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಅವರು ಶನಿವಾರ ವಿಜಯನಗರದಲ್ಲಿರುವ ಶ್ರೀ ಭಾರತಿ ವಿದ್ಯಾಲಯದ ವಾರ್ಷಿಕೋತ್ಸವದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಈ ಸ್ಥಳ ಸಮಾಜಕ್ಕೆ ಪೂರ್ವಗುರುಗಳ ಅನುಗ್ರಹ. ಈ ಜಾಗ ಮೊದಲು ಹಾಗೆ ಖಾಲಿ ಇತ್ತು. ಇಂದು ಎಷ್ಟು ಬೆಳವಣಿಗೆಗೊಂಡಿದೆ ನೋಡಿ, ಈ ಎಲ್ಲ ಯಶಸ್ಸುಗಳು ಹಿಂದೆ ಮಠದ ಭದ್ರ ಅಡಿಪಾಯ ಇದೆ. ಇದು ಗುರುಸ್ಥಾನ ಎನ್ನುವುದು ಎಲ್ಲರಿಗೂ ನೆನಪಿನಲ್ಲಿರಬೇಕು.
ಶ್ರೀಮಠದ ವಿದ್ಯಾವಿಭಾಗದಿಂದ ಅನೇಕ ಉತ್ತಮ ಕೆಲಸಗಳು ಆಗಿವೆ ಇತ್ತೀಚೆಗಷ್ಟೇ ಹಿಂದುಳಿದ ಸಮಾಜ ಎಂದು ಯಾವುದು ಕರೆಯಲ್ಪಡುತ್ತದೆಯೋ, ಆ ಮುಕ್ರಿ ಸಮಾಜದ ಸುಮಾರು 68 ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಶ್ರೀಮಠ ವಹಿಸಿಕೊಂಡಿದೆ. ಕಳೆದೆರಡು ವರ್ಷದಲ್ಲಿ ಸುಮಾರು 32ಲಕ್ಷ ರೂಪಾಯಿ ವಿದ್ಯಾನಿಧಿಯನ್ನು ಹಂಚಿದೆ ಎಂದು ಹೇಳಿದರು.
ಈ ಶಾಲೆಯಲ್ಲಿ ಒಳ್ಳೆಯ ಸುಸಂಸ್ಕೃತ ವಿಧ್ಯಾಭ್ಯಾಸ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ, ಕಲೆಗಳ ವಿಕಾಸ ಆಗ್ತಾ ಇದೆ. ಆದರೆ ಇಲ್ಲಿ ಎಲ್ಲಿ ನೋಡಿದರೂ ಭಾರತದ ಸಂಸ್ಕೃತಿ ಕಾಣಬೇಕು. ಮಕ್ಕಳು ಭಾರತರಾಗಬೇಕು. ಇದು ಮಠದ್ದೇ ವಿಸ್ತರಣೆ. ಆ ರೀತಿಯ ವಾತಾವರಣ ಸೃಷ್ಟಿಯಾಗಬೇಕು. ವಿದ್ಯಾರ್ಥಿಗಳು, ಶಿಕ್ಷಕರು ಎಲ್ಲ ವಸ್ತುಗಳು ಮಠದ ಸಂಸ್ಕೃತಿಯನ್ನು ವ್ಯಕ್ತಪಡಿಸಬೇಕು. ಇವೆರಡನ್ನೂ ಬೆರೆಸಿ ವಿದ್ಯಾರ್ಥಿಗಳನ್ನು ಬೆಳೆಸುವ ಕಾರ್ಯ ಆಗಬೇಕು. ಎಲ್ಲ ವಿದ್ಯಾರ್ಥಿಗಳಿಗೂ ಶುಭವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಖ್ಯಾತ ಜಾನಪದ ವಿದ್ವಾಂಸ ಹಾಗೂ ಬರಹಗಾರರಾದ ಶ್ರೀ ಗೋ. ರು. ಚನ್ನಬಸಪ್ಪ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀಗಳು ಸಾನ್ನಿಧ್ಯವನ್ನು ವಹಿಸಿರುವುದು ಈ ಶಾಲೆಗೇ ಶ್ರೀರಕ್ಷೆಯಾಗಲಿದೆ. ಬೆಂಗಳೂರಿನಲ್ಲಿ ಎಷ್ಟೊಂದು ಶಾಲೆಗಳಿದ್ದರೂ ಈ ಶಾಲೆಯಲ್ಲಿ 800-900 ವಿದ್ಯಾರ್ಥಿಗಳಿದ್ದಾರೆ ಎಂಬುದೇ ಇಲ್ಲಿನ ಶಿಕ್ಷಣ ಗುಣುಮಟ್ಟವನ್ನು ಹೇಳುತ್ತದೆ. ಎಂದರು.
ಸಮಾಜ ಇಂದು ಗೊಂದಲದಲ್ಲಿದೆ. ನಾವೂ ಕೂಡ ಗೊಂದಲದಿಲ್ಲೇದ್ದೇವೆ. ನಾವೇ ಪಡೆದಂತಹ ಸ್ವಾತಂತ್ರ್ಯ, ನಾವೇ ರೂಪಿಸಿದಂತಹ ಕಾನೂನು, ನಾವೇ ರಚಿಸಿದಂತಹ ಸರ್ಕಾರ, ನಾವೇ ಅರಿಸಿದಂತಹ ಪ್ರತಿನಿಧಿಗಳು. ಆದರೆ ಈ ನಮ್ಮ ವ್ಯವಸ್ಥೆಯಲ್ಲಿ ಅದನ್ನು ಅನುಭವಿಸುವಂತಿಲ್ಲ ಬಿಡುವಂತಿಲ್ಲ. ಯಾವುದು ಸತ್ಯ ಯಾವುದು ಮಿಥ್ಯ ಎಂದು ತಿಳಿಯಲಾರದ ಮಟ್ಟಿಗೆ ಕಂಗೆಟ್ಟು ಹೋಗಿದ್ದೇವೆ. ಅಷ್ಟರಮಟ್ಟಿಗೆ ವ್ಯವಸ್ಥೆ ಹದಗೆಟ್ಟಿದೆ. ಶಿಕ್ಷಣದ ಆಶಯ ಜೀವನ ಪ್ರಜ್ಞೆಯನ್ನು ತುಂಬುವುದು, ಅದಿಲ್ಲದೆ ಪ್ರಜ್ಞಾಹೀನವಾಗಿ ದೇಶದ ಪರಿಸ್ಥಿತಿ ಕಂಗೆಟ್ಟುಹೋಗಿದೆ. ಅವರಲ್ಲಿ ಯಾವುದು ಸರಿ-ಯಾವುದು ತಪ್ಪು ಎಂದು ನಿರ್ಧರಿಸುವ ವಿವೇಚನಾ ಶಕ್ತಿಯನ್ನು ತುಂಬಬೇಕು.