November 8, 2016
ಮಂಗಲ ಗೋಯಾತ್ರೆ- ಗೋವಿಗಾಗಿ ನಡೆಯುತ್ತಿರುವ ಆಂದೋಲನ ಮೂರನೇ ಮಹಾಯುದ್ಧ: ರಾಘವೇಶ್ವರ ಶ್ರೀ
ಗೋಪಾಷ್ಟಮಿಯಂದು ಉದ್ಘಾಟನೆಗೊಂಡ ಮಂಗಲ ಗೋಯಾತ್ರೆ
ಮಂಗಲ ಗೋಯಾತ್ರೆ ಉದ್ಘಾಟನಾ ಸಮಾರಂಭ
ಬೆಂಗಳೂರು : ಜಗದ ಸಕಲ ಜೀವರಾಶಿಗಳನ್ನು ಉಳಿಸುವ ಮಹಾಭಿಯಾನ ಮಂಗಲ ಗೋಯಾತ್ರೆಯಾಗಿದ್ದು, ಜಗತ್ತಿನ ಎಲ್ಲ ಜೀವಗಳನ್ನು ಉಳಿಸುವ ಶಕ್ತಿ ಗೋವಿಗಿದೆ. ಗೋವು ಒಂದು ಜೀವ ಮಾತ್ರವಲ್ಲ, ಆರೋಗ್ಯ - ಸಂಪತ್ತು - ಪುಣ್ಯಗಳನ್ನು ಅನುಗ್ರಹಿಸುವ ದೇವ ಕೂಡ ಹೌದು. ಗೋಪಾಷ್ಟಮಿಯ ದಿನದಂದು ಶ್ರೀಕೃಷ್ಣ ಗೋಪಾಲಕನಾದ, ಗೋವರ್ಧನಗಿರಿಯನ್ನು ಎತ್ತಿ ಗೋವುಗಳನ್ನು - ಗೋಪರನ್ನು ರಕ್ಷಿಸಿದ, ಈ ಮೂಲಕ ಕೃಷ್ಣ ಗೋಸಂರಕ್ಷಣೆಯ ಸಂದೇಶವನ್ನು ಜಗತ್ತಿಗೆ ಸಾರಿದ. ಅದೇ ಗೋಪಾಷ್ಟಮಿಯಂದೇ ಮಂಗಲ ಗೋಯಾತ್ರೆ ಆರಂಭವಾಗುತ್ತಿರುವುದು ವಿಶೇಷ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಹೇಳಿದರು.
ರಾಜರಾಜೇಶ್ವರೀ ನಗರದ ಮುನಿವೆಂಕಟಯ್ಯ ರಂಗಮಂದಿರದಲ್ಲಿ ನಡೆದ ಮಂಗಲ ಗೋಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ದೇಶದ ಮೇಲೆ ಆಕ್ರಮಣ ಮಾಡಿದ ಮೊಘಲರು, ಬ್ರಿಟೀಷರಿಗಿಂತ ದೇಶಕ್ಕೆ ಸ್ವಾತಂತ್ರ್ಯ ಬಂದನಂತರ ಗೋವಿಗೆ ಹೆಚ್ಚು ಅನ್ಯಾಯವಾಗಿದೆ. ಸರಿಯಾಗಿ ಐವತ್ತು ವರ್ಷಗಳ ಹಿಂದೆ ಗೋಸಂರಕ್ಷಣೆಗೆಗಾಗಿ ಮಹಾಂದೋಲನ ನಡೆದಿತ್ತು, ಸಂತರ ನೇತೃತ್ವದಲ್ಲಿ ಗೋಹತ್ಯಾ ನಿಷೇಧಕ್ಕಾಗಿ ಆಗ್ರಹಿಸಿ ಹತ್ತು ಲಕ್ಷ ಜನರು ಸಂಸತ್ತಿಗೆ ಮುತ್ತಿಗೆ ಹಾಕಿದ್ದರು. ಇದರಲ್ಲಿ ಹದಿನೈದು ಸಾವಿರ ಸಂತರು, 10,000 ವಕೀಲರು, ಇಪ್ಪತ್ತು ಸಾವಿರ ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು. ಆದರೆ ಅಂದಿನ ಸರ್ಕಾರ ಲಕ್ಷಾಂತರ ಜನರ ಭಾವನೆಗೆ ಕೊಡದೇ ಆಂದೋಲನವನ್ನು ಹತ್ತಿಕ್ಕಿತು, ಗುಂಡಿನ ಮಳೆಗರೆದು ಸಾವಿರಾರು ಜನರ ಜೀವವನ್ನು ಬಲಿಪಡೆಯಿತು, ಸುಮಾರು 50 ಸಾವಿರ ಜನರನ್ನು ಕಾರಾಗೃಹದಲ್ಲಿರಿಸಲಾಯಿತು. ಇದರಿಂದ ಮನನೊಂದ ಜಗದ್ಗುರುಶಂಕರಾಚಾರ್ಯ ನಿರಂಜನದೇವತೀರ್ಥ ಸ್ವಾಮಿಗಳು, ಸ್ವಾಮಿ ಕರಪಾತ್ರಿಗಳು ಹಾಗೂ ಮಹಾತ್ಮ ರಾಮಚಂದ್ರವೀರ ಇವರುಗಳು ಗೋಮಾತೆಯ ಉಳಿವಿಗಾಗಿ 72 ದಿನಗಳ ಕಾಲ ಅನಿರ್ದಿಷ್ಟಾವಧಿ ಉಪವಾಸ ವ್ರತವನ್ನು ಕೈಗೊಂಡರು. ವಲ್ಲಭ ಪಂಥದ ಏಳು ಪೀಠಾಧಿಪತಿಗಳು, ಮಧ್ವ ಸಂಪ್ರದಾಯ,ರಾಮಾನುಜ ಸಂಪ್ರದಾಯ, ಆರ್ಯ ಸಮಾಜ, ನಾಥ ಪಂಥ, ಜೈನ್, ಬೌದ್ಧ ಮತ್ತು ಸಿಖ್ ಸಮುದಾಯ ಪ್ರತಿನಿಧಿಗಳು ಸೇರಿದಂತೆ ಅನೇಕ ಸಂತರು ತಮ್ಮ ಕೈಜೋಡಿಸಿದರು. ಆನಂತರ ಸರ್ಕಾರ ಗೋಹತ್ಯಾ ನಿಷೇಧಿಸುವುದಾಗಿ ಭರವಸೆ ನೀಡಿತಾದರೂ ಇಂದಿನವರೆಗೂ ಅದು ಭರವಸೆಯಾಗಿಯೇ ಉಳಿಯಿತು.
ಗೋಪಾಷ್ಟಮಿಯಂದು, 1966ರ ಗೋರಕ್ಷಾ ಆಂದೋಲನದ 50ನೇ ವರ್ಷದಂದು ಆರಂಭವಾಗುತ್ತಿರುವ ಈ ಮಂಗಲ ಗೋಯಾತ್ರೆ ಆ ಆಂದೋಲನದ ಮುಂದುವರಿದ ಭಾಗವಾಗಿದ್ದು, ಗೋವಿಗಾಗಿ ನಡೆಯುತ್ತಿರುವ ಈ ಆಂದೋಲನವನ್ನು ಮೂರನೇ ಮಹಾಯುದ್ಧ ಅನ್ನಬಹುದಾಗಿದ್ದು, ನಾಡಿನ ಸಂತರು ಈ ಯಾತ್ರೆಯ ನೇತೃತ್ವವಹಿಸಿದ್ದಾರೆ. ಯಾವುದೇ ರಾಜಕೀಯ, ಮತ, ಪಂಥಗಳಿಗೆ ಇದು ಸೀಮಿತವಾಗದೇ, ಗೋರಕ್ಷಣೆಯೇ ಯಾತ್ರೆಯ ಉದ್ದೇಶವಾಗಿದೆ. ಗೋರಕ್ಷಣೆಗಾಗಿ ಪ್ರಾಣತ್ಯಾಗಕ್ಕೂ ಸಿದ್ದ ಎಂದ ಅವರು, ನಾಡಿನ ಜನತೆ ಈ ಮಹಾಭಿಯಾನದಲ್ಲಿ ಪಾಲ್ಗೊಂಡು ಗೋರಕ್ಷಣೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಬೇಲಿಮಠದ ಸ್ವಾಮಿಗಳು ಮಾತನಾಡಿ ಸ್ವಾತಂತ್ರ ಸೇನಾನಿ ಮಂಗಲ್ ಪಾಂಡೆಯನ್ನು ಈ ಯಾತ್ರೆ ಹೊತ್ತೊಯ್ಯುತ್ತಿರುವದು ವಿಶೇಷವಾಗಿದ್ದು, ಕೇವಲ ಸಾಕಾಣಿಕೆ, ಲಾಭ ನಷ್ಟದ ಲೆಕ್ಕಾಚಾರ ಮಾಡುತ್ತಿರುವ ಈ ಕಾಲಘಟ್ಟದಲ್ಲಿ ಗೋವಿನ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕೆಲಸ ಶ್ರೀ ರಾಘವೇಶ್ವರಭಾರತೀ ಸ್ವಾಮಿಗಳ ನೇತೃತ್ವದಲ್ಲಿ, ನಮ್ಮ ಕನ್ನಡದ ನೆಲದಲ್ಲಿ ನಡೆಯುತ್ತಿರುವುದು ನಮಗೆ ಹೆಮ್ಮೆ ತಂದಿದೆ. ಪ್ಲಾಸ್ಟಿಕ್ ತಿಂದು ಪ್ರಾಣಾಪಾಯದಲ್ಲಿರುವ ಗೋವಿನ ಚಿಕಿತ್ಸೆ ಮಾಡಿ ಅದನ್ನು ರಕ್ಷಿಸುವ ಅಮೃತಗರ್ಭ ಆಂದೋಲನ ಈ ಯಾತ್ರೆಯ ಪ್ರಮುಖ ಅಂಶಗಳಲ್ಲೋಂದು, ಇದಕ್ಕಿಂತ ದೊಡ್ಡ ದೇವರ ಪೂಜೆ ಇಲ್ಲ ಎಂದರು.
ಮಂಗಲ ಗೋಯಾತ್ರೆ
ಆಯುರಾಶ್ರಮದ ಶ್ರೀ ವಿಶ್ವಸಂತೋಷಭಾರತೀ ಸ್ವಾಮಿಗಳು ಮಾತನಾಡಿ, ಸ್ವರ್ಣ ಕೇತು ನಾಡಿಯ ಮೂಲಕ ಸೂರ್ಯನ ಕಿರಣಗಳನ್ನು ಎಳೆದುಕೊಂಡು ಅದನ್ನು ಚಿನ್ನದಂಶವಾಗಿ ಮಾರ್ಪಾಡು ಮಾಡುವ ಶಕ್ತಿಯಿರುವ ಒಂದೇ ಒಂದು ಜೀವಿ ಗೋವು, ಹುಲಿಯ ಬದಲು ಗೋವನ್ನೇ ರಾಷ್ಟ್ರ ಲಾಂಛನವನ್ನಾಗಿಸಬೇಕು ಎಂದು ಆಗ್ರಹಿಸಿದರು.
ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನಮಠದ ಶ್ರೀ ಕುಮಾರ ಚಂದ್ರಶೇಖರಾನಂದ ಸ್ವಾಮಿಗಳು ಮಾತನಾಡಿ, ರೈತರನ್ನು ಉಳಿಸಿ - ಬೆಳೆಸಿದಾಗ ಮಾತ್ರ ಗೋ ರಕ್ಷಣೆ ಸಾಧ್ಯ, ಹಣದಾಸೆಗಾಗಿ ಗೋವನ್ನು ಮಾರುವುದನ್ನು ತಪ್ಪಿಸಬೇಕು ಎಂದ ಅವರು, ಗೋವಿನ ಕುರಿತಾಗಿ ಅರಿವು ಮೂಡಿಸುವುದು ಅನಿವಾರ್ಯವಾಗಿದ್ದು, ಈಗಿನ ಕಾಲಘಟ್ಟದಲ್ಲಿ ಗೋಯಾತ್ರೆ ನಡೆಸುತ್ತಿರುವುದು ಅತ್ಯಂತ ಪ್ರಶಸ್ತವಾದುದು ಎಂದು ಅಭಿಪ್ರಾಯಪಟ್ಟರು.
ಚಿಂತಕರಾದ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಉದ್ದೇಶದ ದೃಷ್ಟಿಯಿಂದ ನೋಡಿದಾಗ ಜಗತ್ತಿನ ಅತ್ಯಂತ ದೊಡ್ಡ ಕಾರ್ಯಕ್ರಮ ಇದಾಗಿದ್ದು, ಜಗತ್ತನ್ನು ಪುನರ್ನಿಮಿಸುವ ಉದ್ದೇಶವನ್ನು ಈ
ಮಂಗಲ ಗೋಯಾತ್ರೆ ಹೊಂದಿದೆ.ಗೋವುಗಳನ್ನು ಉಳಿಸುವುದು ಅಂದರೆ ಒಂದು ಶ್ರೇಷ್ಠ ಪರಂಪರೆಯನ್ನು, ಸಂಸ್ಕೃತಿಯನ್ನು ಉಳಿಸಿದಂತೆ. ಗೋವು ಸಂಚರಿಸುವ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಅಮೃತಪಥ ಆಂದೋಲನದ ಮೂಲಕ ಭಾರತ ವಿಷಮುಕ್ತವಾಗಲಿ ಎಂದು ಆಶಿಸಿದರು.
ಸಾಹಿತಿಗಳಾದ ಗೋ ರು ಚನ್ನಬಸಪ್ಪ ಅವರು ಮಾತನಾಡಿ, ಕೊಟ್ಟಿಗೆಯಲ್ಲಿ ಹಸು, ತೊಟ್ಟಿಲಲ್ಲಿ ಕೂಸು ಮತ್ತು ಜೊತೆಯಲ್ಲಿ ಗಂಡ ಇದ್ದರೆ, ಬೇರೆ ಯಾವುದೇ ಜಗತ್ತು ಬೇಡ ಎಂದು ಜನಪದಲ್ಲಿ ಹೇಳಲಾಗಿದೆ.ದೇಸಿಯತೆಯನ್ನು ಉಳಿಸಿಕೊಳ್ಳದಿರುವ ಸಜ್ಜನಿಕೆ ಇಲ್ಲದಿದ್ದರೆ ನಮ್ಮ ನಾಗರೀಕತೆಗೆ ನಾವು ಏನು ಅರ್ಥ ಕೊಡಲು ಸಾಧ್ಯ ಎಂದು ಪ್ರಶ್ನಿಸಿದ ಅವರು ಗೋವಿನ ಸೃಷ್ಟಿ ಎನ್ನುವಂತದ್ದು ಸೃಷ್ಟಿಯ ಅದ್ಬುತಗಳಲ್ಲಿ ಅದ್ಬುತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಮಾತನಾಡಿ, ನಮ್ಮ ದೇಶದಲ್ಲಿ ಆರುಲಕ್ಷಕ್ಕೂ ಅಧಿಕ ಹಳ್ಳಿಗಳಿವೆ, ಇದು ಕೃಷಿ ಪ್ರಧಾನ ದೇಶ. ಹೀಗಿದ್ದರೂ ಕೃಷಿಗೆ ಮೂಲಾಧಾರವಾಗಿರುವ ಗೋವಿನ ಸ್ಥಿತಿ ಚಿಂತಾಜನಕವಾಗಿದೆ. ಪ್ರಪಂಚದಲ್ಲಿ ಅತಿಹೆಚ್ಚು ಗೋಮಾಂಸ ರಫ್ತು ಮಾಡುವ ದೇಶ ನಮ್ಮದು ಎನ್ನಲು ಖೇದವಾಗುತ್ತದೆ ಎಂದ ಅವರು,
ಮಂಗಲ ಗೋಯಾತ್ರೆಯ ಮೂಲಕವಾದರೂ ಜನರಲ್ಲಿ ಗೋವಿನ ಕುರಿತಾಗಿ ಅರಿವು ಮೂಡಲಿ ಎಂದರು.
ಮಂಗಲಗೋಯಾತ್ರೆಯ ಅಧ್ಯಕ್ಷರಾದ ವಿದ್ವಾನ್ ಜಗದೀಶ ಶರ್ಮ ಅವರು ಪ್ರಾಸ್ತಾವಿಕ ಮಾತನಾಡಿ,
ಮಂಗಲ ಗೋಯಾತ್ರೆಯ ಉದ್ದೇಶ ಹಾಗೂ ಅದರ ಅಗತ್ಯತೆಯ ಕುರಿತು ತಿಳಿಸಿದರು. ಇದಕ್ಕೂ ಮೊದಲು ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ಮಹಾನಂದಿ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ, ಗೋಧ್ವಜಾರೋಹಣವನ್ನು ನೆರವೇರಿಸುವುದರ ಮೂಲಕ ಸಪ್ತರಾಜ್ಯಗಳಲ್ಲಿ ಸಂಚರಿಸುವ ರಥಗಳಿಗೆ ಶ್ರೀಶ್ರೀ ರಾಘವೇಶ್ವರಭಾರತೀ ಸ್ವಾಮಿಗಳು ಚಾಲನೆ ನೀಡಿದರು. ಮಂಗಲರಥ ಸೇರಿದಂತೆ ಹತ್ತು ರಥಗಳು ನಾಡಿನಾದ್ಯಂತ ಸಂಚರಿಸಿ ಗೋವಿನ ಕುರಿತಾದ ಭಾವಜಾಗರಣೆ ಮಾಡಲಿದ್ದು , ಪ್ರಮುಖವಾಗಿ ರೈತರು ಹಾಗೂ ವಿದ್ಯಾರ್ಥಿಗಳಲ್ಲಿ ಗೋವಿನ ಮಹತ್ವದ ಅರಿವನ್ನು ಮೂಡಿಸಲಿವೆ. ಈ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಯಿಂದ ಗೋಪೂಜೆಯನ್ನು ಆಯೋಜಿಸಲಾಗಿತ್ತು, ಸಾವಿರಾರು ಸಂಖ್ಯೆಯ ಗೋಪ್ರೇಮಿಗಳು ಗೋಪೂಜೆಯಲ್ಲಿ ಪಾಲ್ಗೊಂಡರು.
ಸಿದ್ಧಾರೂಡ ಮಿಶನ್ನಿನ ಶ್ರೀಶ್ರೀ ಆರೂಢಭಾರತಿ ಸ್ವಾಮಿಗಳು, ಶ್ರೀ ಚಂದ್ರೇಶಾನಂದ ಸ್ವಾಮಿ ಮಹಾರಾಜ್, ಶ್ರೀ ಸಾಧನಾಶ್ರಮ, ಶ್ರೀ ವೃಷಿದೇವ ನರೇಂದ್ರನ್ ಜಿ, ಶ್ರೀ ಪ್ರಭೋದಾನಂದ ಸ್ವಾಮಿಗಳು,ಶಂಕರಾನಂದ ಮಠ ಸೇರಿದಂತೆ 20ಕ್ಕೂ ಅಧಿಕ ಸಂತರು ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಸೇರಿದ 5 ಸಾವಿರ ಜನರಿಗೆ ಗೋರಕ್ಶ್ಜಣೆಯ ಪ್ರತಿಜ್ಞೆಯನ್ನು ಬೋಧಿಸಿದರು.