ವಾರಣಾಸಿ : ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವಾರಣಾಸಿಗೆ ಭೇಟಿ ನೀಡಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ವಾರಣಾಸಿಗೆ ನರೇಂದ್ರ ಮೋದಿ ಅವರ 5 ನೇ ಭೇಟಿ ಇದಾಗಿದೆ.
ವಾರಣಾಸಿಗೆ ಆಗಮಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಮಹಾಮನ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪಕ ಮದನ್ ಮೋಹನ್ ಮಾಳವೀಯ ಅವರ ನೆನೆಪಿಗಾಗಿ ಈ ರೈಲಿಗೆ ಮಹಾಮನ ಎಂದು ಹೆಸರಿಡಲಾಗಿದೆ.
ಈ ರೈಲು ಲಕ್ನೋ ಮೂಲಕ ವಾರಣಾಸಿ ಮತ್ತು ದೆಹಲಿ ಮಧ್ಯೆ ವಾರದಲ್ಲಿ 3 ದಿನ ಸಂಚರಿಸಲಿದೆ. ಇದು 800 ಕಿ. ಮೀ ದೂರವನ್ನು ಸುಮಾರು 14 ಗಂಟೆಗೂ ಕಡಿಮೆ ಸಮಯದಲ್ಲಿ ಕ್ರಮಿಸಲಿದೆ. ಇದರಲ್ಲಿ ಎಲ್ ಇ ಡಿ ಪರದೆ ಅಳವಡಿಸಲಾದ ಹೊಸ ಎಸಿ ಕೋಚ್ ಅಳವಡಿಸಲಾಗಿದೆ. ಇದರ ಎಲ್ಲಾ ಕೋಚ್ ಗಳಲ್ಲಿ, ಕಸದ ಬುಟ್ಟಿ, ಬಯೋ-ಶೌಚಾಲಯಗಳು ಸೇರಿದಂತೆ ಆಧುನಿಕ ವ್ಯವಸ್ಥೆಗಳಿವೆ.
ಇದಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರು ದಿವ್ಯಾಂಗ ಮಕ್ಕಳ ಜೊತೆ ಚರ್ಚೆ ನಡೆಸಲಿದ್ದಾರೆ. ಹಲವು ದಿವ್ಯಾಂಗರಿಗೆ ಕೃತಕ ಅಂಗಗಳು, ಮೂರು ಗಾಲಿಯ ಸೈಕಲ್ ಮತ್ತು ಇತರ ಉಪಕರಣಗಳನ್ನು ನೀಡಲಿದ್ದಾರೆ.
ನಂತರ ಲಕ್ನೋ ಡಾ ಬಾಬಾ ಸಾಹೇಬ್ ಭೀಮ ರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯದ ಘಟಿಕೋತ್ಸವದ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.