Sullia : ನಮ್ಮ ಶಕ್ತಿಸಾಮರ್ಥ್ಯ ವೃದ್ಧಿಸಿಕೊಳ್ಳುವ ಸಂದರ್ಭದಲ್ಲಿ ಇತರರ ಖಂಡನೆ ಬೇಡ. ಪ್ರತಿಯೊಬ್ಬರಲ್ಲೂ ಅವರದೇ ಆದ ಪ್ರತಿಭೆ ಇದೆ. ವಿವೇಕಾನಂದರಂತೆ ನಾವು ಉತ್ತಮ ಕೆಲಸವನ್ನು ಮಾಡಲು ಉತ್ತಮ ಚಿಂತನೆ ಮಾಡೋಣ. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರ ಮೂಲಕ ನಮ್ಮ ಚಿಂತನೆ, ಜ್ಞಾನ ಹಾಗೂ ಅಧ್ಯಯನ ಶೀಲತೆಯ ಗುಣವನ್ನು ಹೆಚ್ಚಿಸಿಕೊಳ್ಳೋಣ. ನಮ್ಮ ಬಗ್ಗೆ ನಾವು ಸ್ವ ಅಧ್ಯಯನ ಮಾಡಿಕೊಳ್ಳಬೇಕು. ಯಾವತ್ತೂ ನಮಗೆ ಸಹಾಯ ಮಾಡಿದವರನ್ನು ಮರೆಯದೇ, ಪ್ರೀತಿಸಿದವರನ್ನು ದ್ವೇಷಿಸದೇ, ವಿಶ್ವಾಸವಿಟ್ಟವರಿಗೆ ವಂಚನೆ ಮಾಡದೇ, ವಿವೇಕಾನಂದರ ವಿಚಾರಧಾರೆಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ದೇಶದ ಪ್ರಗತಿಗೆ ಯುವಕರಾದ ನಾವು ಸಹಕರಿಸೋಣ ಎಂದು ಅಕ್ಷರ ಸಿ. ದಾಮ್ಲೆಯವರು ಹೇಳಿದರು.
ಜ. ೧೨ ರಂದು ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ರಾಷ್ಟ್ರೀಯ ಯುವ ದಿನವನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಮಾತನಾಡಿ ದೀನದಲಿತರ ಸೇವೆಯೇ ದೇವರ ಸೇವೆ ಎಂದು ವಿವೇಕಾನಂದರು ಹೇಳಿದ್ದಾರೆ. ಪ್ರತಿಧರ್ಮದಲ್ಲೂ ಇರುವ ಅಂಶಗಳನ್ನು ಸ್ವೀಕರಿಸಿ, ವಿಶ್ವಮಾನವ ಧರ್ಮವನ್ನು ಸಾರೋಣ. ದೇಶಕ್ಕೆ ನಮ್ಮ ಕೊಡುಗೆಯ ಬಗ್ಗೆ ಚಿಂತಿಸುವ ಮೂಲಕ ಭವ್ಯ ಭಾರತ ಕಟ್ಟೋಣ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡಿದ ಚೈತನ್ಯದಾಯಕ ವ್ಯಕ್ತಿ ವಿವೇಕಾನಂದರು ಅವರ ಜೀವನದ ವಿಚಾರಧಾರೆಗಳು ನಮಗೆ ದಾರಿದೀಪವಾಗಲಿ ಎಂದರು.
ವೇದಿಕೆಯಲ್ಲಿ ವಿದ್ಯಾರ್ಥಿ ನಾಯಕಿ ಅನು ಡಿ. ಉಪನ್ಯಾಸಕಿ, ಶ್ರಾವ್ಯಾ ಎಂ.ಎಸ್ ಉಪಸ್ಥಿತರಿದ್ದರು ಶಿಕ್ಷಕ ಶ್ರೀ ಪ್ರಸನ್ನ ಐವರ್ನಾಡು ಸ್ವಾಗತಿಸಿ, ಶ್ರೀ ರಘುರಾಮ ಭಟ್ ಸಿ. ವಂದಿಸಿದರು.