ಬಿಹಾರ : ಬಿಹಾರ ವಿಧಾನಸಭಾ ಚುನಾವಣೆಯ ಅಂಗವಾಗಿ ಕಳೆದ 24 ತಾಸುಗಳಲ್ಲಿ 5ನೇ ರ್ಯಾಲಿಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಬಿಹಾರದ ಜನತೆಗೆ, 'ನೀವೇ ಸುಪ್ರೀಂ ಕೋರ್ಟು, ನೀವೇ ನ್ಯಾಯಾಧೀಶರುಗಳು. ರಾಜ್ಯವನ್ನು ನಾಶಮಾಡಿದವರನ್ನು ನೀವೇ ಶಿಕ್ಷಿಸಬೇಕು' ಎಂದು ಹೇಳಿದರು.
ಶುಕ್ರವಾರ, ಅ.9ರಂದು ಬಿಹಾರದ ಸಸಾರಾಂ ನಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, 'ಕಳೆದ 60 ವರ್ಷಗಳಲ್ಲಿ ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂಧನದ ಅಂಗಗಳು ಈ ರಾಜ್ಯವನ್ನು ಆಳಿವೆ. ಕಾಂಗ್ರೆಸ್ ಪಕ್ಷ 35ವರ್ಷ, ದೊಡ್ಡಣ್ಣ(ಲಾಲೂ ಯಾದವ್) ಹಾಗೂ ಸಣ್ಣಣ್ಣ (ನಿತೀಶ್ ಕುಮಾರ್) ಮಿಕ್ಕ 25ವರ್ಷ ಆಳಿದ್ದಾರೆ. ತಮ್ಮ ಆಡಳಿತದ ಬಗ್ಗೆ ಹಾಗೂ ಖರ್ಚು ಮಾಡಿದ ಪ್ರತಿ ಪೈಸೆಗೂ ಅವರು ಲೆಕ್ಕ ಕೊಡಬೇಕು'ಎಂದು ಹೇಳಿದರು.
'ನೀವೇ ಸುಪ್ರೀಂ ಕೋರ್ಟು, ನೀವೇ ಮುಖ್ಯ ನ್ಯಾಯಾಧೀಶರು ಸಹ. ನೀವು ಗುಂಡಿ ಒತ್ತಿ (ಚುನಾವಣೆಯಲ್ಲಿ) ಬಿಹಾರವನ್ನು ನಾಶಮಾಡಿದ ಅವರಿಗೆ ತಕ್ಕ ಶಿಕ್ಷೆ ಕೊಡಬೇಕು' ಎಂದು ಪ್ರಧಾನಿ ಮೋದಿ ಕರೆ ಕೊಟ್ಟರು.
ದಿನಕ್ಕೆ ನಾಲ್ಕು, ಐದು ಚುನಾವಣಾ ಪ್ರಚಾರ ಸಭೆಗಳನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ಮೋದಿ ನಿತೀಶ್ ಕುಮಾರ್ ಪಾಳಯಕ್ಕೆ ತಮ್ಮ ವಾಗ್ಬಾಣಗಳಿಂದ ತಲೆನೋವು ಉಂಟುಮಾಡಿದ್ದಾರೆ.
ಇತ್ತೀಚಿನ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ನಿಛ್ಚಳ ಬಹುಮತ ಬರುವ ಕಂಡುಬಂದಿರುವುದು ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ ಗೆ ಆತಂಕ ತಂದಿದೆ. ತಮ್ಮ ರ್ಯಾಲಿಗಳಲ್ಲಿ ಅವರುಗಳು ಚುನಾವಣೆಯಲ್ಲಿ ಗೆದ್ದು ಬಂದರೆ ರಾಜ್ಯದ ಅಭಿವೃದ್ಧಿಗಾಗಿ ಏನು ಮಾಡುತ್ತೇವೆ ಎಂದು ಹೇಳುವುದರ ಬದಲು ಪ್ರಧಾನಿ ಮೋದಿಯವರನ್ನು ಹಳಿಯುವುದಕ್ಕೇ ಬಹುಪಾಲು ಸಮಯ ಮೀಸಲಾಗಿಟ್ಟಿದ್ದಾರೆ.
ಬಿಹಾರದ ಅಭಿವೃದ್ಧಿಯ ಬಗ್ಗೆಯೇ ಮಾತನಾಡುವ ಪ್ರಧಾನಿ ಮೋದಿ ಔರಂಗಾಬಾದ್ ನಲ್ಲಿ ನಡೆದ ಸಭೆಯಲ್ಲಿ, ಈ ಚುನಾವಣೆ ಪ್ರಗತಿಯ ಬಗ್ಗೆ ನಡೆಯುತ್ತದೆ... ಯುವಕರು ಬಿಹಾರದ ಭವಿಷ್ಯವನ್ನೇ ಬದಲಾಯಿಸಲು ಪಣತೊಟ್ಟಿದ್ದಾರೆ. ಬಿಹಾರ ನಾಶ ಹೊಂದಲು ಅವರು ಬಿಡುವುದಿಲ್ಲ' ಎಂದು ಹೇಳಿದರು.