ನವದೆಹಲಿ : ನಿವೃತ್ತ ಯೋಧರು ದಶಕಗಳಿಂದ ಒತ್ತಾಯಿಸುತ್ತಿದ್ದ ಏಕ ಶ್ರೇಣಿ ಏಕ ಪಿಂಚಣಿ ಯೋಜನೆಯನ್ನು ನರೇಂದ್ರ ಮೋದಿ ಸರಕಾರ ಶನಿವಾರ ಘೋಷಿಸುವ ನಿರೀಕ್ಷೆಯಿದೆ.
ಮೂಲಗಳ ಪ್ರಕಾರ ನಿವೃತ್ತ ಯೋಧರ ಬೇಡಿಕೆಯಂತೆ ಸರಕಾರ ಈ ಯೋಜನೆಯನ್ನು ಜುಲೈ 1, 2014ರಿಂದಲೇ ಅನ್ವಯವಾಗುವಂತೆ ಜಾರಿಗೆ ತರಲು ಒಪ್ಪಿದೆ.
ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ಇಂದು ಅಪರಾಹ್ನ ಸುಮಾರು 3ಗಂಟೆಗೆ ಈ ಯೋಜನೆಯನ್ನು ಪ್ರಕಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಯೋಜನೆಯನ್ನು ಜಾರಿಗೆ ತಂದರೆ ಸರಕಾರದ ಬೊಕ್ಕಸಕ್ಕೆ ವಾರ್ಷಿಕ ರೂ.8,000 ಕೋಟಿಯಿಂದ ರೂ.10,000 ಕೋಟಿಯಷ್ಟು ಹೆಚ್ಚಿನ ಹೊರೆ ಬೀಳಲಿದ್ದು ಅದಕ್ಕೆ ಬೇಕಾದ ಕರಡು ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ.
ಏಕ ಶ್ರೇಣಿ ಏಕ ಪಿಂಚಣಿ (ಓಅರ್ ಒಪಿ) ಯೋಜನೆ ಹುತಾತ್ಮರಾದ್ ಯೋಧರ ಮಡದಿಯರಿಗೂ ಲಭ್ಯವಾಗಲಿದೆ. ಆದರೆ, ಸೇವಾ ಅವಧಿ ಮುಗಿಯುವ ಮುನ್ನವೇ ನಿವೃತ್ತಿ (ವಿ.ಆರ್.ಎಸ್.) ತೆಗೆದುಕೊಂಡ ಯೋಧರಿಗೆ ಇದು ಅನ್ವಯಿಸುವುದಿಲ್ಲ.
ವಿಧವೆಯರಿಗೆ ಬಾಕಿ ಮೊತ್ತ ಏಕ ಕಂತಿನಲ್ಲಿ ದೊರೆತರೆ ಉಳಿದವರಿಗೆ ನಾಲ್ಕು ಅರ್ಧ-ವಾರ್ಷಿಕ ಕಂತುಗಳಲ್ಲಿ ಕೊಡಲಾಗುತ್ತದೆ.
ಈ ಯೋಜನೆಯ ಕುರಿತು ನಿವೃತ್ತ ಸೈನಿಕರ ಜೊತೆಗೆ ಮಾತುಕತೆ ಇನ್ನೂ ಮುಗಿದಿಲ್ಲವಾದರೂ ಸರಕಾರ ಈ ಯೋಜನೆಯನ್ನು ಪ್ರಕಟಿಸಲು ಮುಂದಾಗಿದೆ.
ಪಿಂಚಣಿ ಯೋಜನೆಯ ಬಗ್ಗೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಿವೃತ್ತ ಯೋಧರು ಕಳೆದ ೮೨ ದಿನಗಳಿಂದ ಮುಷ್ಕರ ನಡೆಸುತ್ತಿದ್ದು, ಮೋದಿ ಸರಕಾರಕ್ಕೆ ಇದನ್ನು ಬಗೆಹರಿಸಲು ಸಾಕಷ್ಟು ಒತ್ತಡಗಳಿವೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಸಮಸ್ಯೆಯನ್ನು ಶೀಘ್ರವಾಗಿ ಬಹೆಗರಿಸುವುದು ಮೋದಿ ಸರಕಾರಕ್ಕೆ ಅನಿವಾರ್ಯವಾಗಿದೆ.
ನಿವೃತ್ತ ಯೋಧರು ಹಲವಾರು ಬೇಡಿಕಗಳನ್ನು ಮುಂದಿಟ್ಟುಕೊಂಡಿದ್ದರೂ ಅವುಗಳಲ್ಲಿ ಕೆಲವೊಂದು ವಿಷಯಗಳಿಗೆ ಸರಕಾರ ಒಪ್ಪಿಗೆ ನೀಡುವುದಕ್ಕೆ ನಿರಾಕರಿಸಿದೆ. ಪ್ರತಿವರ್ಷ ಪಿಂಚಣಿ ಪರಿಷ್ಕರಣೆ ಮಾಡಬೇಕೆಂದು ಯೋಧರು ಒತ್ತಾಯಿಸುತ್ತಿದ್ದರೂ ಸರಕಾರ ಐದು ವರ್ಷಗಳಿಗೊಮ್ಮೆ ಮಾತ್ರ ಪರಿಷ್ಕರಣೆ ಮಾಡಲು ಒಪ್ಪಿದೆ.
ಏಕ ಶ್ರೇಣಿ ಏಕ ಪಿಂಚಣಿ ಯೋಜನೆಯ ಜಾರಿಯಿಂದ ಸುಮಾರು 25 ಲಕ್ಷ ನಿವೃತ್ತ ಯೋಧರಿಗೆ ಪ್ರಯೋಜನವಾಗಲಿದೆ.