ಭಗಲ್ಪುರ, ಬಿಹಾರ : ಈ ದಾಖಲೆ ಜನಸಂದಣಿಯನ್ನು ನೋಡಿ ರಾಜಕೀಯ ಪಂಡಿತರು ಜನರ ಮನಸ್ಸನ್ನು ಅಳೆಯಬಲ್ಲರು. ಬಿಹಾರದಲ್ಲಿ ಎನ್.ಡಿ.ಎ ಯ ವಿಜಯವನ್ನು ಯಾರೊಬ್ಬರೂ ತಡೆಯಲಾರರು' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬಿಹಾರದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಆರ್.ಜೆ.ಡಿ ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದರು.
'2019ರಲ್ಲಿ ನಾನು (ಬಿಜೆಪಿ ಸರಕಾರ) ಐದು ವರ್ಷಗಳಲ್ಲಿ ವ್ಯಯಿಸಿದ ಒಂದೊಂದು ಪೈಸಕ್ಕೂ ಲೆಕ್ಕ ಕೊಡುತ್ತೇನೆ, ಆದರೆ ಅವರು (ನಿತೀಶ್ ಮತ್ತು ಲಾಲೂ) ಕಳೆದ 25 ವರ್ಷಗಳಲ್ಲಿ ಬಿಹಾರದಲ್ಲಿ ಏನೇನು ಮಾಡಿದರು ಅಂತ ಲೆಕ್ಕ ಕೊಡಲು ಸಿದ್ದರಿದ್ದಾರೆಯೆ?' ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು.
'ಕೇವಲ ಎನ್.ಡಿ.ಎ. ರ್ಯಾಲಿಗಳಲ್ಲಿ ಮತ್ತು ನನ್ನ ವಿದೇಶೀ ಪ್ರವಾಸಗಳಲ್ಲಿ ಜನರು ಮೋದಿ, ಮೋದಿ, ಮೋದಿ ಎಂದು ಕೂಗುತ್ತಾರೆ ಅಂದುಕೊಂದಿದ್ದೆ. ಆದರೆ ಇವರು (ನಿತೀಶ್ ಮತ್ತು ಲಾಲೂ) ಸಹ ಮೋದಿ, ಮೋದಿ, ಮೋದಿ ಎಂದು ಪಠಿಸುತ್ತಿರುವುದನ್ನು ನೋದಿ ಆಶ್ಚರ್ಯವಾಗುತ್ತಿದೆ' ಎಂದು ಮೋದಿ ವ್ಯಂಗವಾಡಿದರು.
'ಕಾಂಗ್ರೆಸ್ ಜೊತೆ ಕೈಜೋಡಿಸುವುದರೊಂದಿಗೆ ಅವರು (ನಿತೀಶ್, ಲಾಲೂ ಯಾದವ್) ತಮ್ಮನ್ನು ರೂಪಿಸಿದ ಗುರು ಹಾಗೂ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದ ಜಯಪ್ರಕಾಶ ನಾರಾಯಣ್ ಅವರಿಗೆ ದ್ರೋಹ ಎಸಗಿದ್ದಾರೆ' ಎಂದು ಮೋದಿ ಹೇಳಿದರು.
' ಕೇಂದ್ರ ಸರಕಾರ ಬಿಹಾರಕ್ಕೆ 3.75 ಲಕ್ಷ ಕೋಟಿ ರೂ. ನೀಡಿದೆ. ಅದರಲ್ಲಿ ಕೇವಲ 2.7 ಲಕ್ಷ ಕೋಟಿ ರೂ. ಗಳಿಗೆ ಲೆಕ್ಕ ಸಿಕ್ಕಿದೆ. ಇನ್ನುಳಿದ ಹಣ ಎಲ್ಲಿ ಹೋಯಿತು?.. ಅದು ಮೇವಿಗೆ ಹೋಯಿತೆ? ಎಂದು ಪರೋಕ್ಷವಾಗಿ ಲಾಲೂ ಗೆ ಮೋದಿ ಟಾಂಗ್ ಕೊಟ್ಟರು.
ನವೆಂಬರ್ ನಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಮಂಗಳವಾರ, ಅ.೧ ರಂದು ಪ್ರಧಾನಿ ಮೋದಿ ಭಗಲ್ಪುರದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.