BW News Bureau : ರಾಜ್ಯಾದ್ಯಂತ ಈ ವರ್ಷ ಮಳೆ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರ ಕುಸಿತವಾಗಿರುವುದರಿಂದ ಬೆಂಗಳೂರು ಸೇರಿದಂತೆ ಲೋಡ್ ಶೆಡ್ಡಿಂಗ್ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಬೆಂಗಳೂರಿನಲ್ಲಿ ಕನಿಷ್ಠ ಎರಡು ತಾಸು, ಬೇರೆಡೆ ಗರಿಷ್ಠ ಎಂಟು ತಾಸು ವಿದ್ಯುತ್ ಕಡಿತವಾಗಲಿದೆ. ಯಾವ ಭಾಗದಲ್ಲಿ ಎಷ್ಟು ಸಮಯ ಲೋಡ್ ಶೆಡ್ಡಿಂಗ್ ಮಾಡಬೇಕು ಎಂಬುದನ್ನು ಲೆಕ್ಕಾಚಾರ ಮಾಡಿ ತೀರ್ವನಿಸುವ ಜವಾಬ್ದಾರಿಯನ್ನು ಇಂಧನ ಇಲಾಖೆಗೆ ವಹಿಸಲಾಗಿದೆ.
ಸಂಪುಟ ಸಭೆಯಲ್ಲಿ ಕೈಗೊಂಡ ಈ ಲೋಡ್ಶೆಡ್ಡಿಂಗ್ ನಿರ್ಧಾರ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ ಬಿ ಜಯಚಂದ್ರ, ಆ.30ರ ಮಾಹಿತಿಯಂತೆ ರಾಜ್ಯದಲ್ಲಿರುವ 13 ಜಲಾಶಯಗಳಲ್ಲಿ ಒಟ್ಟಾರೆ ನೀರಿನ ಪ್ರಮಾಣ ಅವುಗಳ ಸಂಗ್ರಹಣಾ ಸಾಮರ್ಥ್ಯದ ಶೇ.56ರಷ್ಟು ಮಾತ್ರವಿದೆ. ಅದರಲ್ಲೂ ವಿದ್ಯುತ್ ಉತ್ಪಾದನೆ ಮಾಡುವ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರ ಕುಸಿದಿದೆ. ಒಂದೆರಡು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮಳೆ ಪ್ರಮಾಣವೂ ಸಾಕಷ್ಟು ಕಡಿಮೆಯಾಗಿದ್ದು, ಜಲಾಶಯಗಳಿಗೆ ನೀರಿನ ಹರಿವು ಕಡಿಮೆಯಾಗಿದೆ.
ಮುಂದಿನ ದಿನಗಳಲ್ಲೂ ವಾಡಿಕೆ ಮಳೆ ಬರುವ ಸಾಧ್ಯತೆ ಇಲ್ಲದಿರುವ ಕಾರಣ ಕುಡಿಯುವ ನೀರಿಗಾಗಿ ಜಲಾಶಯಗಳಲ್ಲಿ ನೀರು ಸಂಗ್ರಹಿಸಬೇಕಿದೆ. ಅದರಿಂದಾಗಿ ವಿದ್ಯುತ್ ಉತ್ಪಾದನೆ ಕಷ್ಟಸಾಧ್ಯವಾಗಿದೆ. ಇನ್ನೊಂದೆಡೆ ರಾಯಚೂರು ಶಾಖೋತ್ಪನ್ನ ಕೇಂದ್ರ ಸೇರಿದಂತೆ ಉಷ್ಣ ವಿದ್ಯುತ್ ಸ್ಥಾವರಗಳಲ್ಲೂ ನಿರೀಕ್ಷಿತ ಪ್ರಮಾಣದ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ ಎಂದು ತಿಳಿಸಿದರು.
ಇದೆಲ್ಲದರ ಪರಿಣಾಮ ರಾಜ್ಯದಲ್ಲಿ 10,189 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿದ್ದರೂ ಪ್ರಸ್ತುತ 6,600ರಿಂದ 7,300 ಮೆಗಾವ್ಯಾಟ್ ವಿದ್ಯುತ್ ಮಾತ್ರ ಲಭ್ಯವಾಗುತ್ತಿದ್ದು, ಸುಮಾರು 3 ಸಾವಿರ ಮೆಗಾವ್ಯಾಟ್ ವಿದ್ಯುತ್ ಖೋತಾ ಆಗಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಉತ್ಪಾದನೆ ಮತ್ತಷ್ಟು ಕುಸಿಯುವ ಸಾಧ್ಯತೆ ಇರುವುದರಿಂದ ಲೋಡ್ಶೆಡ್ಡಿಂಗ್ ಅನಿವಾರ್ಯ ಎಂಬ ತೀರ್ಮಾನವನ್ನು ಸಚಿವ ಸಂಪುಟ ಸಭೆ ಕೈಗೊಂಡಿದೆ ಎಂದರು.
ಕೇಂದ್ರ ಗ್ರಿಡ್ನಿಂದ ರಾಜ್ಯಕ್ಕೆ ಬರಬೇಕಾಗಿರುವ ಇನ್ನೂ 300 ಮೆಗಾವ್ಯಾಟ್ ವಿದ್ಯುತ್ ತರಿಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರಿಡಾರ್ ಸಮಸ್ಯೆಯಿಂದಾಗಿ ಕೇಂದ್ರ ಗ್ರಿಡ್ನಿಂದ ರಾಜ್ಯಕ್ಕೆ ಬರಬೇಕಾಗಿರುವ 300 ಮೆಗಾವ್ಯಾಟ್ ವಿದ್ಯುತ್ ಬರುತ್ತಿಲ್ಲ. ಮಧ್ಯರಾತ್ರಿ ವೇಳೆ ತೆಲಂಗಾಣ ಮೂಲಕ ಇದನ್ನು ತರಿಸಿಕೊಳ್ಳಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಮಧ್ಯರಾತ್ರಿ ವೇಳೆ ಈ ವಿದ್ಯುತ್ ತರಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರಸ್ತುತ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇರುವುದರಿಂದ ರೈತರು ಸಹಕರಿಸಬೇಕು ಎಂದು ಮನವಿ ಮಾಡಿದ ಅವರು, ಸಮಸ್ಯೆ ಬಗೆಹರಿಸಲು 700 ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.