ಬೆಂಗಳೂರು : ಉತ್ತರ ಪ್ರದೇಶದ ಅಲಹಾಬಾದ್ನಲ್ಲಿರುವ 'ಗಂಗಾ ನದಿ ಗ್ಯಾಲರಿ' ಮತ್ತು ಅಸ್ಸಾಂನ 'ಬ್ರಹ್ಮಪುತ್ರಾ ನದಿ ಗ್ಯಾಲರಿ' ಮಾದರಿಯಲ್ಲಿ ಮೈಸೂರು ವಿವಿ ಆವರಣದಲ್ಲಿ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ 'ಕಾವೇರಿ ನದಿ ಗ್ಯಾಲರಿ' ನಿರ್ಮಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಈ ಗ್ಯಾಲರಿಯು ಕಾವೇರಿ ನದಿಯ ಒಟ್ಟು ವಿಸ್ತೀರ್ಣ 746 ಕಿ.ಮೀ. ಪ್ರಯಾಣದ ಅನುಭವ ನೀಡುವುದರ ಜೊತೆಗೆ, ಕಾವೇರಿ ನದಿಯ ಇತಿಹಾಸ, ಉಗಮ ಸ್ಥಳ, ಹಾದು ಹೋಗುವ ಪ್ರದೇಶಗಳು, ಉಪನದಿಗಳು, ವಿವಿಧ ಕಡೆ ಕಟ್ಟಲಾಗಿರುವ ಆಣೆಕಟ್ಟೆಗಳು, ನದಿ ಪಾತ್ರದಲ್ಲಿರುವ ನೈಸರ್ಗಿಕ ಸಂಪತ್ತು, ನದಿಯಿಂದ ಆಗುತ್ತಿರುವ ವಿದ್ಯುತ್ ಉತ್ಪಾದನೆ, ಕೃಷಿ, ನೀರಾವರಿ ಮತ್ತು ಕುಡಿಯುವ ನೀರು ಮತ್ತಿತರ ಉಪಯೋಗಗಳ 'ವರ್ಚುಯಲ್ ಪ್ರವಾಸ' (ದೃಶ್ಯ ಮತ್ತು ಚಿತ್ರಗಳನ್ನು) ಮಾಡಿಸಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ದೇಶಪಾಂಡೆ, ನ.29ರಂದು ನಡೆದ ಕರ್ನಾಟಕ ಜ್ಞಾನ ಆಯೋಗದ ಸಭೆಯಲ್ಲಿ ಕಾವೇರಿ ಗ್ಯಾಲರಿ ನಿರ್ಮಿಸುವ ಬಗ್ಗೆ ಚರ್ಚಿಸಲಾಯಿತು. ಕರ್ನಾಟಕ ಜ್ಞಾನ ಆಯೋಗ, ಭಾರತೀಯ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿ (ಎನ್ಎಎಸ್ಐ), ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಪರಿಷತ್ತು (ಎನ್ಸಿಎಸ್ಎಂ) ಉನತ್ತ ಶಿಕ್ಷಣ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಮೈಸೂರು ವಿವಿ ಜಂಟಿ ಸಹಕಾರದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು. ಎನ್ಎಎಸ್ಐ ಗ್ಯಾಲರಿಯ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ದಪಡಿಸಲಿದ್ದು, ಎನ್ಸಿಎಸ್ಎಂ ಈ ಗ್ಯಾಲರಿಯ ನಿರ್ವಹಣೆ ಮಾಡಲಿದೆ ಎಂದರು.
ಗ್ಯಾಲರಿಯಲ್ಲಿ ಸ್ಯಾಟ್ಲೈಟ್ ಚಿತ್ರಗಳು, ಡಿಜಿಟಲ್ ವಿಡಿಯೋ ಶೋ ಸೇರಿದಂತೆ ಇತರ ಆಧುನಿಕ ಮತ್ತು ವೈಜ್ಞಾನಿಕ ಸಾಧನಗಳ ಮೂಲಕ ಕಾವೇರಿ ನದಿಯ ಇತಿಹಾಸ, ಪರಿಸರ, ಸಂಸ್ಕೃತಿ, ಪರಂಪರೆ ಬಗ್ಗೆ ಸಮಗ್ರ ಮಾಹಿತಿ ಒದಗಿಸಲಾಗುವುದು ಎಂದು ವಿವರಿಸಿದರು.
ಭಾರತೀಯ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿ ಹಾಗೂ ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯಗಳ ಪರಿಷತ್ತು ಈಗಾಗಲೇ ಗಂಗಾನದಿ ಗ್ಯಾಲರಿ ಮತ್ತು ಬ್ರಹ್ಮಪುತ್ರ ನದಿ ಗ್ಯಾಲರಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿವೆ. ಆ ಎರಡೂ ಗ್ಯಾಲರಿಗಳ ಮಾದರಿಯಲ್ಲಿ ಕಾವೇರಿ ನದಿ ಗ್ಯಾಲರಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಗ್ಯಾಲರಿ ನಿರ್ಮಾಣಕ್ಕೆ ಸೂಕ್ತ ಹಾಗೂ ಸುಸಜ್ಜಿತ ಕಟ್ಟಡ ಒದುಗಿಸಲು ಮೈಸೂರು ವಿವಿ ಒಪ್ಪಿಕೊಂಡಿದೆ. ಗ್ಯಾಲರಿ ನಿರ್ಮಾಣ ಪೂರ್ಣಗೊಂಡು ಅದು ಅನುಷ್ಠಾನಕ್ಕೆ ಬರಬೇಕಾದರೆ ಅಂದಾಜು 9 ತಿಂಗಳು ಸಮಯ ಬೇಕಾಗಬಹುದು ಎಂದು ತಿಳಿಸಿದರು.