ನವದೆಹಲಿ : ಈದ್-ಉಲ್-ಫಿತರ್ ಮತ್ತು ಜಗನ್ನಾಥ ರಥ ಯಾತ್ರೆಯ ಸಂದರ್ಭದಲ್ಲಿ ಶನಿವಾರ, ಜು 18 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಶುಭ ಹಾರೈಸಿದ್ದಾರೆ.
ಈದ್-ಉಲ್-ಫಿತರ್ ಪವಿತ್ರ ಗಳಿಗೆಯಲ್ಲಿ ನನ್ನ ಶುಭಾಶಯಗಳು. ರಂಜಾನ್ ಪವಿತ್ರ ಮಾಸದ ಮುಕ್ತಾಯ ಜಗನ್ನಾಥ ರಥಯಾತ್ರೆಯ ಪುಣ್ಯದಿನದಂದೇ ಬಂದಿರುವುದು ಸಮಾಜದಲ್ಲಿನ ಭ್ರಾತೃತ್ವ ಮತ್ತು ಸೌಹಾರ್ದವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಈ ಹಬ್ಬವು ನಮ್ಮ ದೇಶದಲ್ಲಿ ಶಾಂತಿ ಮತ್ತು ಏಕತೆಯನ್ನು ಬಲಗೊಳಿಸಲಿ ಮತ್ತು ಎಲ್ಲರಿಗೂ ಏಳಿಗೆ ಮತ್ತು ಉತ್ತಮ ಆರೋಗ್ಯ ಪ್ರಾಪ್ತವಾಗಲಿ ಎಂದು ನುಡಿದಿದ್ದಾರೆ.
138 ನೇ ಜಗನ್ನಾಥ ರಥ ಯಾತ್ರೆಯ ಸಂದರ್ಭದಲ್ಲಿ ಶುಭ ಹಾರೈಸಿದ ಪ್ರಧಾನಿ ಮೋದಿ, ತಾವು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಗನ್ನಾಥ ದೇವಾಲಯದಲ್ಲಿ ನಡೆಸಿದ ಪೂಜಾ ವಿಧಿ ವಿಧಾನಗಳ ಚಿತ್ರಗಳನ್ನು ಶೇರ್ ಮಾಡಿದ್ದಾರೆ.
ರಥದಲ್ಲಿ ಕೂತು ಜನರನ್ನು ಆಶೀರ್ವದಿಸುವ ಸ್ವಾಮಿ ಜಗನ್ನಾಥನಿಗೆ ನಮ್ಮ ಪ್ರಣಾಮಗಳು. ಸ್ವಾಮಿ ಜಗನ್ನಾಥ ಕೃಪಾಕಟಾಕ್ಷದಿಂದ ಸಮಾಜದಲ್ಲಿ ಸದ್ಭಾವನೆ, ಏಕತೆ,ಸಂತೋಷ, ಚೈತನ್ಯ ಮೂಡಲಿ. ಸ್ವಾಮಿ ಜಗನ್ನಾಥ ಅನುಗ್ರಹದಿಂದ, ಬಡವರ ಮತ್ತು ರೈತರ ಅಭ್ಯುದಯವಾಗಲಿ ಎಂದು ಹೇಳಿದ್ದಾರೆ.