ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್ ಇಂಡಿಯಾ ಸಪ್ತಾಹಕ್ಕೆ ಜುಲೈ 1 ರಂದು ಚಾಲನೆ ನೀಡಿದರು.
2.5 ಲಕ್ಷ ಹಳ್ಳಿಗಳಲ್ಲಿ ಬ್ರೋಡ್ ಬ್ಯಾಂಡ್ ಸೇವೆ ಕಲ್ಪಿಸುವ ಯೋಜನೆಯನ್ನು ಕೈಗಾರಿಕೋದ್ಯಮಿಗಳಾದ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ, ಭಾರತೀ ಗ್ರೂಪ್ ನ ಮುಖ್ಯಸ್ಥ ಸುನಿಲ್ ಭಾರತೀ ಮಿತ್ತಲ್,ಅದಾನಿ ಗ್ರೂಪ್ ಅಧ್ಯಕ್ಷ್ಯ ಗೌತಮ್ ಅದಾನಿ, ಟಾಟಾ ಗೂಪ್ ನ ಸಿಇಓ ಸೈರಸ್ ಮಿಸ್ತ್ರಿ, ಆದಿತ್ಯಾ ಬಿರ್ಲಾ ಗ್ರೂಪ್ ನ ಮುಖ್ಯಸ್ಥ ಕುಮಾರಮಂಗಲಮ್ ಮುಂತಾದವರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ಬಿಜೆಪಿ ನಾಯಕ ಎಲ್ ಕೆ ಅಡ್ವಾನಿ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಈ ಯೋಜನೆಯನ್ನು ಭಾರತದ ಇ- ಕ್ರಾಂತಿ ಎಂದೇ ಬಣ್ಣಿಸಲಾಗಿದೆ. ಸ್ಕೂಲ್ ಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಈ ಯೋಜನೆಯ ಮೂಲಕ ವೈಫೈ ವ್ಯವಸ್ಥೆ ಕಲ್ಪಿಸಲಾಗುವುದು. ಸರ್ಕಾರಿ ಸೇವೆಗಳನ್ನು ಜನರಿಗೆ ನೇರವಾಗಿ ತಲುಪಿಸುವುದು ಈ ಯೋಜನೆಯ ಉದ್ದೇಶ. 2,50,000 ಗ್ರಾಮ ಪಂಚಾಯತ್ ಗಳಿಗೆ ಬ್ರೋಡ್ ಬ್ಯಾಂಡ್ ಮೂಲಕ ಸಂಪರ್ಕ ಕಲ್ಪಿಸಲಾಗುವುದು.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಲಾಕರ್, ಇ- ಎಜುಕೇಷನ್, ಇ- ಹೆಲ್ತ್, ಇ- ಸೈನ್ ಮತ್ತು ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ಗಳನ್ನು ಅನಾವರಣಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 10,000 ಜನ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ, ತಮ್ಮ ಕಂಪನಿಯಿಂದ ಡಿಜಿಟಲ್ ಇಂಡಿಯಾ ಯೋಜನೆಯಲ್ಲಿ 2.5 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಘೋಷಿಸಿದರು. ಡಿಜಿಟಲ್ ಇಂಡಿಯಾ ಯೋಜನೆ ನಾವು ಇರುವ ರೀತಿ ಮತ್ತು ಕೆಲಸ ಮಾಡುವ ರೀತಿಯನ್ನು ಬದಲಾವಣೆ ಮಾಡುವುದು ಎಂದು ಈ ಸಂದರ್ಭದಲ್ಲಿ ಮುಖೇಶ್ ಅಂಬಾನಿ ತಿಳಿಸಿದರು.
ಮುಂದಿನ 5 ವರ್ಷಗಳಲ್ಲಿ 7 ಬಿಲಿಯನ್ ಡಾಲರ್ ಅನ್ನು ಡಿಜಿಟಲ್ ಇಂಡಿಯಾ ಯೋಜನೆಯಲ್ಲಿ ಹೂಡಿಕೆ ಮಾಡುವುದಾಗಿ ಹೇಳಿದ ಆದಿತ್ಯಾ ಬಿರ್ಲಾ ಗ್ರೂಪ್ ನ ಅಧ್ಯಕ್ಷ ಕೆ ಎಮ್ ಬಿರ್ಲಾ, ಪ್ರಧಾನಿ ನರೇಂದ್ರ ಮೋದಿಯವರು ಡಿಜಿಟಲ್ ಇಂಡಿಯಾ ಯೋಜನೆ ದೂರದೃಷ್ಠಿಯನ್ನು ಮನದಟ್ಟಾಗುವಂತೆ ವಿವರಿಸಿದ್ದಾರೆ. ನಾವು ಈ ಬಿಡುಗಡೆಗೆ ಹರ್ಷೋದ್ಗಾರ ವ್ಯಕ್ತಪಡಿಸುತ್ತೇವೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ತುಣುಕುಗಳು ಃ
ಡಿಜಿಟಲ್ ಇಂಡಿಯಾ ಕನಸ ನಸಸಾಗಿಸಲು ಮತ್ತು ಭಾರತದ ಭವಿಷ್ಯವನ್ನು ಬದಲಿಸಲು ಅತ್ಯಂತ ಸಮಗ್ರವಾದ ಯೋಜನೆಯನ್ನು ರೂಪಿಸಿದ ರವಿಶಂಕರ್ ಪ್ರಸಾದ್ ಮತ್ತು ಅವರ ತಂಡದ ಪರಿಶ್ರಮವನ್ನು ನಾನು ಶ್ಲಾಘಿಸುತ್ತೇನೆ.
ಈ ಯೋಜನೆಯ ಫಲವಾಗಿ ಕೋಟ್ಯಂತರ ಭಾರತೀಯರ ಕನಸುಗಳು ನನಸಾಗುತ್ತವೆ ಎಂದು ನಾನು ದೃಢವಾಗಿ ನಂಬುತ್ತೇನೆ.
ಡಿಜಿಟಲ್ ಇಂಡಿಯಾದ ಯಶಸ್ಸಿನಿಂದಾಗಿ ಇಡೀ ವಿಶ್ವವೇ ಮುಂದಿನ ಹೊಸ ಕಲ್ಪನೆಗೆ ಭಾರತದತ್ತ ನೋಡಬೇಕೆಂದು ನಾನು ಕನಸು ಕಾಣುತ್ತೇನೆ.
ಅತಿ ವೇಗದ ಐ-ವೇಗಳು ದೇಶಾದ್ಯಂತ ಪಸರಿಸಿ ಡಿಜಿಟಲ್ ಇಂಡಿಯಾದ ಮೂಲಕ ಇಡೀ ಭಾರತವನ್ನು ಒಗ್ಗೂಡಿಸಬೇಕು ಎಂಬುದು ನನ್ನ ಕನಸಾಗಿದೆ. ಜ್ನಾನವೆಂಬುದೇ ಶಕ್ತಿ ಇದು ಜನರನ್ನು ಸಬಲೀಕರಿಸಬಲ್ಲುದು.
ಡಿಜಿಟಲ್ ಇಂಡಿಯಾದ ಮೂಲಕ ಸರಕಾರಿ ಕೆಲಸಗಳು ಸುಗಮವಾಗಿ ಜನರನ್ನು ತಲುಪಬೇಕು. ಜನರಿಗೆ ಅಗತ್ಯವಾದ ಮಾಹಿತಿಗೆ ಯಾವುದೇ ತಡೆ ಇರಬಾರದು, ಇದು ನನ್ನ ಕನಸಾಗಿದೆ.
ಮುಕ್ತ ಸರಕಾರ, ಪಾರದರ್ಶಕ ಆಡಳಿತ - ಇದು ನನ್ನ ಕನಸಿನ ಡಿಜಿಟಲ್ ಇಂಡಿಯಾ.
ಸೈಬರ್ ಸುರಕ್ಷೆ ಇಂದು ವಿಶ್ವ ಎದುರಿಸುತ್ತಿರುವ ಅತಿ ದೊಡ್ಡ ಸವಾಲಾಗಿದ್ದು, ಒಂದು ಕ್ಲಿಕ್ಕಿಂದ ಅದೆಷ್ಟೋ ವಿಚಾರಗಳನ್ನು ಬದಲಿಸಬಹುದು.
ಸೈಬರ್ ಸುರಕ್ಷಾ ವಿಚಾರದಲ್ಲಿ ಭಾರತದಲ್ಲಿ ತಯಾರಾದ ವಸ್ತುವೆಂದರೆ ಅದು ಅತ್ಯಂತ ಸುರಕ್ಷಿತವಾದದ್ದು ಎಂದು ನಾವು ವಿಶ್ವಕ್ಕೆ ಭರವಸೆ ಕೊಡುವಂತಾಗಬೇಕು.
'ಡಿಸೈನ್ ಇನ್ ಇಂಡಿಯಾ' (ಭಾರತದಲ್ಲಿ ವಿನ್ಯಾಸಗೊಳಿಸು) ಎಂಬ ಧ್ಯೇಯವನ್ನು ಇಟ್ಟುಕೊಂಡು ನನ್ನ ದೇಶದ ಯುವಕರು ಡಿಜಿಟಲ್ ಇಂಡಿಯಾ ಉದ್ದೇಶವನ್ನು ಸಫಲಗೊಳಿಸಲು ಮುಂದಾಗಬೇಕು ಎಂದು ನಾನು ಆಶಿಸುತ್ತೇನೆ.
ಈ ನಿಟ್ಟಿನಲ್ಲಿ ಭಾರತದ ಯುವಕರು ಸ್ಥಾಪಿಸುವ ಸಂಸ್ಥೆಗಳಿಗೆ ಎಲ್ಲಾ ರೀತಿಯ ಸಹಾಯವನ್ನು ಕೊಡಲು ಸರಕಾರ ಸಿದ್ಧವಾಗಿದೆ. ಹೊಸ ಚಿಂತನೆಗಳ ಮೂಲಕ ಗುರಿ ಸಾಧನೆಗೆ ಯುವಕರನ್ನು ಪ್ರೇರೇಪಿಸಬೇಕು. ಇದಕ್ಕಾಗಿ ಡಿಜಿಟಲ್ ಇಂಡಿಯಾ, ಡಿಸೈನ್ ಇನ್ ಇಂಡಿಯಾ ಯೋಜನೆಗಳು ಅವಶ್ಯಕವಾಗಿವೆ.
ಮಾಹಿತಿ ತಂತ್ರಜ್ನಾನ ಒಂದು ಕ್ರಾಂತಿಯಾಗಿದ್ದು, ಇದರ ಸದುಪಯೋಗ ಪಡೆದುಕೊಂಡು ಭಾರತದ ಗರಿಮೆಯನ್ನು ಹೆಚ್ಚಿಸುವ ಅವಕಾಶವನ್ನು ನಾವು ಕಳೆದುಕೊೞಬಾರದು.
ನಮ್ಮ ದೇಶದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯೂ ಸಂಪೂರ್ಣವಾಗಿ ಪೇಪರ್ ರಹಿತ ಹಾಗೂ ಕಟ್ಟಡ ರಹಿತವಾಗುವ ದಿನಗಳು ದೂರವಿಲ್ಲ.
ಈ-ಆಢಳಿತ ಬಹು ಬೇಗ ಎಂ-ಆಢಳಿತವಾಗುವ ದಿನಗಳು ಹತ್ತಿರ ಬರುತ್ತಿವೆ. 'ಎಂ' ಎಂದರೆ 'ಮೋದಿ' ಎಂದರ್ಥವಲ್ಲ, ಬದಲಾಗಿ ಮೊಬೈಲ್ ಎಂದರ್ಥ!.
ಹಿಂದಿನ ಕಾಲದಲ್ಲಿ ಜನರು ನದಿಗಳ ದಡಗಳಲ್ಲಿ ವಾಸಿಸುತ್ತಿದ್ದರು, ನಂತರ ಹೈವೇಗಳ ಪಕ್ಕದಲ್ಲಿ ವಾಸಿಸತೊಡಗಿದರು. ಇನ್ನು ಮುಂದೆ ಅವರು ಆಪ್ಟಿಕಲ್ ಫೈಬರ್ ಕೇಬಲ್ ಗಳು ಹಾದು ಹೋಗುವಲ್ಲಿ ಮನೆಗಳನ್ನು ಕಟ್ಟಿಕೊೞುತ್ತಾರೆ.
ಕಾಲ ಬದಲಾಗಿದೆ. ಹಿಂದೆ ನಾವು ಯಾರದಾದರೂ ಮನೆಗಳಿಗೆ ಹೋದಾಗ ಮಕ್ಕಳು ನಮ್ಮ ಜೇಬಿನಲ್ಲಿದ್ದ ಪೆನ್ನು ಅಥವಾ ನಮ್ಮ ಕನ್ನಡಕಗಳ ಜೊತೆ ಆಟವಾಡುತ್ತಿದ್ದವು. ಈಗ ನಮ್ಮ ಮೊಬೈಲ್ ಗಳ ಜೊತೆ ಅವು ಆಟವಾಡುತ್ತವೆ. ನಾವು ಕಾಲಕ್ಕೆ ತಕ್ಕಂತೆ ಬದಲಾಗಬೇಕು.