ನವದೆಹಲಿ : ನಕಲಿ ಪದವಿ ಪ್ರಕರಣದಲ್ಲಿ ದೆಹಲಿ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರನ್ನು ಬಂಧಿಸಿರುವುದು ಆಮ್ ಆದ್ಮಿ ಪಕ್ಷವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದ್ದು, ಇದೀಗ ತೋಮರ್ ನಕಲಿ ಪದವಿ ಪ್ರಕರಣದ ಬಗ್ಗೆ ಆಂತರಿಕ ತನಿಖೆ ನಡೆಸುವುದಾಗಿ ಘೋಷಿಸಿದೆ. ಆದರೆ ನಕಲಿ ಪದವಿ ಹೊಂದಿದ್ದಾರೆಂಬ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧವೂ ತನಿಖೆ ನಡೆಸಿ ಎಂದು ಆಪ್ ತಿರುಗೇಟು ನೀಡಿದೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಎಪಿ ಮುಖಂಡ ಸಂಜಯ್ ಸಿಂಗ್, ತೋಮರ್ ನಕಲಿ ಪದವಿ ಪತ್ರ ವಿವಾದ ಜನರ ಮನಸ್ಸಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸಿದೆ. ಹಾಗಾಗಿ ಉತ್ತರ ಅಗತ್ಯವಾಗಿದೆ. ಹಾಗಾಗಿ ಪಕ್ಷದ ಆಂತರಿಕ ಲೋಕಪಾಲ್ ಮೂಲಕ ತನಿಖೆ ನಡೆಸುವುದಾಗಿ ತಿಳಿಸಿದರು.
ಅಲ್ಲದೇ ನಕಲಿ ಪದವಿ ಹೊಂದಿರುವ ಆರೋಪ ಎದುರಿಸುತ್ತಿರುವ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಹಾಗೂ ಸಂಸದ ರಮಾಶಂಕರ್ ಕಟಾರಿಯಾ ವಿರುದ್ಧವೂ ಕೇಂದ್ರ ಸರ್ಕಾರ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.
ತೋಮರ್ ಪ್ರಕರಣದಲ್ಲಿ ಕ್ರಮ ಕೈಗೊಂಡಂತೆ, ಇರಾನಿ ಮತ್ತು ಕಟಾರಿಯ ವಿರುದ್ಧವೂ ದೆಹಲಿ ಪೊಲೀಸರು ಕ್ರಮ ಕೈಗೊಳ್ಳಲಿ. ಈ ಬಗ್ಗೆ ಆಪ್ ಕಾನೂನು ಸಲಹೆ ಪಡೆಯುತ್ತಿರುವುದಾಗಿ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಕ್ಯಾಬಿನೆಟ್ ನಲ್ಲಿರುವ ಶೇ.30ರಷ್ಟು ಸಚಿವರು ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ. ಆದರೆ ಮೋದಿಗೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಮಯವಿಲ್ಲ, ಯಾಕೆಂದರೆ ಅವರು ವಿದೇಶ ಪ್ರವಾಸದಲ್ಲಿ ಇರುತ್ತಾರೆ ಎಂದು ಸಿಂಗ್ ಇದೇ ವೇಳೆ ವ್ಯಂಗ್ಯವಾಡಿದ್ದಾರೆ.