ನವದೆಹಲಿ : ನಕಲಿ ಕಾನೂನು ಪದವಿ ಪ್ರಮಾಣ ಪತ್ರ ನೀಡಿದ ಆರೋಪದಡಿ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಬಂಧನಕ್ಕೊಳಗಾಗಿರುವುದು ಆಪ್ ಪಕ್ಷದಲ್ಲಿ ಅಸಮಾಧಾನ ಉಂಟುಮಾಡಿದೆ.
ಪ್ರಕರಣದಿಂದ ತೀವ್ರ ಆಕ್ರೋಶಗೊಂಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಿತೇಂದ್ರ ತೋಮರ್ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮಾಜಿ ಕಾನೂನು ಸಚಿವ ತೋಮರ್ ಜೈಲಿಗೆ ಹೋಗಿರುವುದರಿಂದ ಆಪ್ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿದ್ದು, ಜಿತೇಂದ್ರ ತೋಮರ್ ಅವರನ್ನು ಉಚ್ಛಾಟಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ. ಅಲ್ಲದೇ ಕಾನೂನು ಸಮರ ನಡೆಸುತ್ತಿರುವ ಆಪ್ ಶಾಸಕನಿಗೆ ಪಕ್ಷದಿಂದ ಯಾವುದೇ ನೆರವು ನೀಡದೇ ಇರಲು ತೀರ್ಮಾನಿಸಲಾಗಿದೆ.
ಇದೇ ವೇಳೆ ನಕಲಿ ಪದವಿ ಬಗ್ಗೆ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಅಧಿಕಾರಿಗಳು ತೋಮರ್ ನನ್ನು ಬಿಹಾರದ ಭಗಲ್ ಪುರಕ್ಕೆ ಕರೆದೊಯ್ಯಲಿದ್ದಾರೆ. ತೋಮರ್ ಜಾಮೀನು ಅರ್ಜಿ ವಜಾಗೊಂಡ ಬಳಿಕ ಆಮ್ ಆದ್ಮಿ ಪಕ್ಷದ ವರಸೆ ಬದಲಾಗಿದ್ದು, ಪಕ್ಷದಿಂದ ಉಚ್ಚಾಟಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.