ನವದೆಹಲಿ : ಕಳೆದ ಕೆಲ ದಿನಗಳಿಂದ ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿಯೇ ಬಂಡೆದಿದ್ದ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್ ಸೇರಿದಂತೆ ನಾಲ್ವರು ನಾಯಕರನ್ನು ಆಮ್ ಆದ್ಮಿ ಪಕ್ಷದಿಂದ ಉಚ್ಛಾಟಿಸಲಾಗಿದೆ. ಇದರಿಂದ ಆಪ್ ನಲ್ಲಿ ಎದ್ದಿದ್ದ ಆಂತರಿಕ ಕಲಹ ತಾರಕಕ್ಕೇರಿದೆ.
ಈ ಹಿಂದೆ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪಕ್ಷದ ಹಲವು ನಾಯಕರ ವಿರುದ್ಧ ಮಾಡಿದ್ದ ಆರೋಪಗಳು ಮತ್ತು ದೆಹಲಿ ವಿಧಾನಸಭಾ ಚುನಾವಣೆ ವೇಳೆ ನಡೆಸಿದ್ದರು ಎನ್ನಲಾದ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ, ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್ ಸೇರಿ ಹಲವು ಬಂಡಾಯ ನಾಯಕರಿಗೆ ಆಪ್ ಪಕ್ಷದಿಂದ ನೋಟಿಸ್ ನೀಡಲಾಗಿತ್ತು.
ಈ ನೋಟಿಸ್ ಗೆ ಭೂಷಣ್ ಮತ್ತು ಯಾದವ್ ಸೋಮವಾರವಷ್ಟೇ ಉತ್ತರ ರವಾನಿಸಿದ್ದರು. ಜೊತೆಗೆ ಪಕ್ಷದ ಕೆಲ ನಾಯಕರು ಖೊಟ್ಟಿ ಕಂಪನಿಗಳಿಂದ ದೇಣಿಗೆ ಸ್ವೀಕರಿಸಿದ ಆರೋಪ ಮಾಡಿದ್ದರು. ಅದರ ಬೆನ್ನಲ್ಲೇ, ಸೋಮವಾರ ರಾತ್ರಿ, ಪಕ್ಷದ ಸಂಸ್ಥಾಪಕ ಸದಸ್ಯರಾದ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್, ಆನಂದ್ ಕುಮಾರ್ ಮತ್ತು ಅಜಿತ್ ಝಾ ಅವರನ್ನು ಪಕ್ಷದಿಂದ ಉಚ್ಛಾಟಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೂ ಕೆಲ ದಿನಗಳ ಹಿಂದಷ್ಟೇ ಪಕ್ಷದ ವಕ್ತಾರ ಹುದ್ದೆ, ಹಲವು ಸಮಿತಿಗಳಿಂದ ಈ ಇಬ್ಬರೂ ನಾಯಕರಿಗೆ ಕೊಕ್ ನೀಡಲಾಗಿತ್ತು.