ಕಲ್ಲಿಕೋಟೆ : ವಿಮಾನ ನಿಲ್ದಾಣ ಪ್ರವೇಶ ಕುರಿತಾದ ವಿವಾದ ಜಗಳಕ್ಕೆ ತಿರುಗಿ ಉಂಟಾದ ಘರ್ಷಣೆಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಕೇರಳದಲ್ಲಿ ನಡೆದಿದೆ.
ಇಲ್ಲಿನ ಕರಿಪುರ್ ವಿಮಾನ ನಿಲ್ದಾಣಕ್ಕೆ ಪ್ರವೇಶ ಕುರಿತಂತೆ ಭದ್ರತಾ ಉಸ್ತುವಾರಿ ನೋಡಿಕೊಳ್ಳುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿ.ಐ.ಎಸ್.ಎಫ್) ಹಾಗೂ ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದ (ಎಎಐ) ನೌಕರರ ಮಧ್ಯೆ ಬಹಳ ದಿನದಿಂದ ವೈಮನಸ್ಯ ಇತ್ತು. ಬುಧವಾರ ಎಎಐ ನೌಕರ ಸನ್ನಿ ಥಾಮಸ್ ಮತ್ತು ಸಿ.ಐ.ಎಸ್.ಎಫ್ ಯೋಧನ ನಡುವೆ ಜಗಳ ವಿಕೋಪಕ್ಕೆ ಹೋಯಿತು. ಈ ಸಂದರ್ಭ ಯೋಧನ ಬಳಿಯಿದ್ದ ಬಂದೂಕನ್ನು ಥಾಮಸ್ ಎಳೆದರು. ಜಗ್ಗಾಟದಲ್ಲಿ ಗುಂಡು ಸಿಡಿದು, ಸಿ.ಐ.ಎಸ್.ಎಫ್ ಯೋಧನೊಬ್ಬ ಮೃತಪಟ್ಟ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಘಟನೆ ಬೆನ್ನಲ್ಲೇ ಸುಮಾರು 100ಕ್ಕೂ ಹೆಚ್ಚು ಸಿ.ಐ.ಎಸ್.ಎಫ್ ಸಿಬ್ಬಂದಿ ರನ್ ವೇಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ. ಕಲ್ಲಿಕೋಟೆಯಿಂದ ತೆರಳುವ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದ್ದು, ಅಲ್ಲಿಗೆ ಆಗಮಿಸಿಬೇಕಿದ್ದ ಎರಡು ವಿಮಾನಗಳನ್ನು ಬೇರೆಡೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಕೇರಳ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ಘಟನೆಯನ್ನು ಖಚಿತಪಡಿಸಿದ್ದು, ವಿಮಾನನಿಲ್ದಾಣಕ್ಕೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕಳುಹಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.