ಮಥುರಾ : ಉತ್ತರ ಪ್ರದೇಶದ ಮಥುರಾದಲ್ಲಿ ಅಕ್ರಮ ಭೂ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ನಡೆದ ಘರ್ಷಣೆಯಲ್ಲಿ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು 200 ಮಂದಿಯನ್ನು ಬಂಧಿಸಿದ್ದಾರೆ.
ಸುಭಾಷ್ ಚಂದ್ರ ಬೋಸ್ ಅನುಯಾಯಿಗಳು ಎಂದು ಹೇಳಿಕೊಳ್ಳುತ್ತಿದ್ದ ಅಜಾದ್ ಭಾರತ್ ವಿಧಿಕ್ ವೈಚಾರಿಕ್ ಕ್ರಾಂತಿ ಸಂತ್ಯಾಗ್ರಹಿ ಸಂಘಟನೆಯ ಸುಮಾರು 3, 500 ಮಂದಿ ಕಾರ್ಯಕರ್ತರು ಅಕ್ರಮವಾಗಿ ಜವಾಹರ್ ಬಾಘ್ ನಲ್ಲಿ ನಿವಾಸಗಳನ್ನು ನಿರ್ಮಿಸಿಕೊಂಡು ಭಾರತದ ರುಪಾಯಿಯನ್ನು ನಿಷೇಧಿಸಿ ತಮ್ಮದೇ ಆದ ಅಜಾದ್ ಹಿಂದ್ ಫೌಜ್ ಕರೆನ್ಸಿಯನ್ನು ಜಾರಿಗೆ ತಂದಿದ್ದರು. ಅಲ್ಲದೆ ಭಾರತ ಸಂವಿಧಾನದಲ್ಲಿ ಬದಲಾವಣೆಗೆ ಆಗ್ರಹಿಸಿದ್ದ ಇವರು ರಾಷ್ಟ್ರಪತಿ ಹಾಗೂ ಪ್ರಧಾನಿ ಹುದ್ದೆಯನ್ನು ರದ್ದುಗೊಳಿಸ ಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದರು.
ಈ ಸಂಘಟನೆಯ ವಿರುದ್ಧ ಸ್ಥಳೀಯ ಜಿಲ್ಲಾಡಳಿತ ಒತ್ತವರಿ ತೆರವು ಗೊಳಿಸುವಂತೆ ಆದೇಶ ನೀಡಿತ್ತು. ಈ ನಿಟ್ಟಿನಲ್ಲಿ ಪೊಲೀಸರು ಭೂ ಒತ್ತುವರಿ ತೆರುವು ಕಾರ್ಯಾಚರಣೆಗೆ ಮುಂದಾದಾಗ ಈ ಘರ್ಷಣೆ ಸಂಭವಿಸಿದೆ. ಘರ್ಷಣೆಯಲ್ಲಿ ಈ ವರೆಗೂ ಮೃತಪಟ್ಟವರ ಸಂಖ್ಯೆ 21ಕ್ಕೇರಿದೆ. ಈ ಸಂಬಂಧ ಈಗಾಗಲೇ 40 ಮಂದಿಯನ್ನು ಬಂಧಿಸಿರುವ ಪೊಲೀಸರು 200 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಘಟನಾ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.