ನವದೆಹಲಿ : ಉರಿ ಉಗ್ರರ ದಾಳಿಗೆ 18 ಯೋಧರು ಹುತಾತ್ಮರಾದ ಘಟನೆಗೆ ಪ್ರತಿಕ್ರಿಯೆ ನೀಡದ ಪ್ರಧಾನಿ ನರೇಂದ್ರ ಮೋದಿ, ಉರಿ ದಾಳಿಗೆ ಪಾಕಿಸ್ತಾನವೇ ಕಾರಣವಾಗಿದ್ದು, ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎನ್ನುವ ಮೂಲಕ ನೆರೆಯ ದೇಶಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಪ್ರಧಾನಿ ಮೋದಿ ಎಚ್ಚರಿಕೆಗೆ ತಲ್ಲಣಗೊಂಡಿರುವ ಪಾಕಿಸ್ತಾನ, ಮೋದಿಯವರದ್ದು ಹಗೆತನದಿಂದ ಕೂಡಿದ ಭಾಷಣವಾಗಿದೆ ಎಂದು ಹೇಳಿದೆ.
ಕೇರಳದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಉರಿ ಮೇಲಿನ ಉಗ್ರರ ದಾಳಿಯನ್ನು ನಾವು ಯಾವತ್ತೂ ಮರೆಯುವುದಿಲ್ಲ ಎನ್ನುವುದನ್ನು ಭಯೋತ್ಪಾದಕರು ಗಮನವಿಟ್ಟು ಕೇಳಿಸಿಕೊಳ್ಳಬೇಕು. ನಮ್ಮ 18 ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ಉಗ್ರರ ದಾಳಿಯನ್ನು ಚುಕ್ತಾಮಾಡಲಾಗುವುದು ಎಂದಿದ್ದರು.
21ನೇ ಶತಮಾನ ಏಷ್ಯಾ ಖಂಡಕ್ಕೆ ಸೇರಿದ್ದು. ಈ ಕನಸನ್ನು ಈಡೇರಿಸಲು ಏಷ್ಯಾದ ಎಲ್ಲ ರಾಷ್ಟ್ರಗಳು ಒಂದು ಹಾದಿಯಲ್ಲಿ ಸಾಗುತ್ತಿದ್ದರೆ, ಪಾಕಿಸ್ಥಾನ ಮಾತ್ರ ಭಯೋತ್ಪಾದನೆಯನ್ನು ಹರಡುವುದನ್ನೇ ಮುಖ್ಯ ಗುರಿಯಾಗಿಸಿಕೊಂಡಿದೆ ಎಂದು ಹೇಳುವ ಮೂಲಕ ಉಗ್ರ ಸಂಘಟನೆಗಳಿಗೂ ಕಠಿಣ ಸಂದೇಶ ನೀಡಿರುವ ಪ್ರಧಾನಿ, ಮುಂದಿನದಿನ ಗಳಲ್ಲಿ ಉಗ್ರರ ವಿರುದ್ಧ ಸಮರ ಸಾರುವ ಸ್ಪಷ್ಟ ಸುಳಿವು ನೀಡಿದ್ದರು.
ಪ್ರಧಾನಿ ಮೋದಿ ಭಾಷಣವನ್ನು ಸಮಗ್ರವಾಗಿ ಗಮನಿಸಿರುವ ಪಾಕಿಸ್ತಾನ ಮಧ್ಯಮಗಳು, ಮೋದಿ ಅವರದ್ದು ವಿಷಪೂರಿತ, ಹಗೆತನದ ಭಾಷಣ ಎಂದು ಹೇಳಿವೆ. ಮೋದಿ ವಿಶ್ವ ಸಮುದಾಯದ ಎದುರು ಪಾಕಿಸ್ತಾನವನ್ನು ಏಕಾಂಗಿಯಾಗಿ ನಿಲ್ಲಿಸುವ ಬೆದರಿಕೆ ಹಾಕಿದ್ದಾರೆ ಎಂದು ವರದಿ ಮಾಡಿದೆ. ಅಲದೇ ಪಾಕ್ ಭಯೋತ್ಪಾದನೆಯನ್ನು ವಿಶ್ವಕ್ಕೆ ರಫ್ತು ಮಾಡುವ ದೇಶ ಎಂದು ಆರೋಪಿಸಿದ್ದಾರೆ ಎಂದು ಪಾಕ್ ಮಾಧ್ಯಮಗಳು ಮೋದಿ ವಿರುದ್ಧ ಕಿಡಿಕಾರುತ್ತಿವೆ.