ನವದೆಹಲಿ : ಜಮ್ಮು-ಕಾಶ್ಮೀರದ ಉರಿ ಉಗ್ರರ ದಾಳಿಯಲ್ಲಿ ಉಗ್ರರು 18 ಭಾರತೀಯ ಯೋಧರನ್ನು ಬಲಿತೆಗೆದುಕೊಂಡ ಹಿನ್ನಲೆಯಲ್ಲಿ ಹಾಗೂ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಮತ್ತು ಗುಂಡಿನ ದಾಳಿ ಹಿನ್ನಲೆಯಲ್ಲಿ ಭಾರತೀಯ ಸೇನೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಒಳಗೆ ನುಗ್ಗಿದ ಭಾರತೀಯ ಸೇನೆ ಉಗ್ರರ ನೆಲೆಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಉಗ್ರ ಕ್ಯಾಂಪ್ ಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದ್ದು, 37ಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ತಿಳಿದುಬಂದಿದೆ.
ಯುದ್ಧದ ಸಂದರ್ಭಗಳಲ್ಲಿ ಅಪಾರಪ್ರಮಾಣದಲ್ಲಿ ಆಸ್ತಿ-ಪಾಸ್ತಿ ಹಾನಿ, ಪ್ರಾಣಹಾನಿ ಸೇರಿದಂತೆ ಬೃಹತ್ ಪ್ರಮಾಣದಲ್ಲಿ ಹಾನಿಗಳು ಉಂಟಾಗುತ್ತವೆ. ಇಂತಹ ಹಾನಿಗಳನ್ನು ತಪ್ಪಿಸುವ ಸಲುವಾಗಿ ಸೀಮಿತ ಜಾಗದಲ್ಲಿ ನಿರ್ದಿಷ್ಟ ವರ್ಗದ ಮೇಲೆ ದಾಳಿ ಮಾಡಲಾಗುತ್ತದೆ ಇದನ್ನು ಸರ್ಜಿಕಲ್ ಸ್ಟ್ರೈಕ್ ಅಥವಾ ಸೀಮಿತ ದಾಳಿ ಎಂದು ಕರೆಯುತ್ತಾರೆ.
* ಪಾಕಿಸ್ತಾನ ನೆಲದ 500ಮೀಟರ್ ನಿಂದ ಸುಮಾರು 2 ಕಿಲೋ ಮೀಟರ್ ದೂರದವರೆಗೆ ನುಗ್ಗಿ ಉಗ್ರರ ಕ್ಯಾಂಪ್ ಮೇಲೆ ಕಮಾಂಡೋ ದಾಳಿ
* ಪಿಓಕೆಯಲ್ಲಿರುವ ಸುಮಾರು 8 ಉಗ್ರರ ಕ್ಯಾಂಪ್ ಗಳನ್ನು ಗುರಿಯಾಗಿರಿಸಿ ದಾಳಿ ನಡೆಸಲಾಗಿದೆ.
* ದಾಳಿಯಲ್ಲಿ 37 ಉಗ್ರರ ಹತ್ಯೆ ಮಾಡಲಾಗಿರುವ ಬಗ್ಗೆ ಮಾಹಿತಿ
* ಪಿಓಕೆಯಲ್ಲಿದ್ದ ಉಗ್ರರು ಜಮ್ಮು ಕಾಶ್ಮೀರ ಮತ್ತು ಆಯಕಟ್ಟಿನ ಸ್ಥಳದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು.
* ದಾಳಿಯ ವೇಳೆ ಲೈನ್ ಆಫ್ ಕಂಟ್ರೋಲ್ (ಎಲ್ ಒಸಿ)ನಲ್ಲಿ ಭಾರತೀಯ ವಾಯುಸೇನಾ ಪಡೆಯಿಂದ ಹೈಅಲರ್ಟ್.
* ಮುಂಜಾಗ್ರತಾ ಕ್ರಮವಾಗಿ ಗಡಿಭಾಗದಲ್ಲಿನ ಗ್ರಾಮಗಳ ಜನರ ಬೇರೆಡೆಗೆ ಸ್ಥಳಾಂತರ.
ಒಟ್ಟಿನಲ್ಲಿ ಭಾರತೀಯ ಸೇನೆ, ಉರಿ ಉಗ್ರರ ದಾಳಿ ದಿಟ್ಟ ಪ್ರತ್ಯುತ್ತರ ನೀಡಿದ್ದು, ಈ ನಡುವೆ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿದ್ದನ್ನು ಪಾಕ್ ಪ್ರಧಾನಿ ನವಾಜ್ ಷರೀಫ್, ಗೃಹ ಸಚಿವ ಆಸೀಫ್ ಒಪ್ಪಿಕೊಂಡಿದ್ದಾರೆ.
ಭಾರತದ ಈ ದಾಳಿಯನ್ನು ನಾವು ಖಂಡಿಸುತ್ತೇವೆ. ಶಾಂತಿಯ ನಮ್ಮ ಇಚ್ಛೆಯನ್ನು ನಮ್ಮ ದೌರ್ಬಲ್ಯ ಎಂಬುದಾಗಿ ಅರ್ಥೈಸಬಾರದು ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಗುಡುಗಿದ್ದಾರೆ.