ಕೊಚ್ಚಿ : ಕೇರಳದಿಂದ ಇತ್ತೀಚೆಗೆ ಕಾಣಿಯಾಗಿರುವ 15 ಯುವಕರ ಪೈಕಿ 23 ವರ್ಷದ ಮೊಹಮ್ಮದ್ ಮಾರ್ವನ್ ನೂ ಒಬ್ಬನಾಗಿದ್ದು. ಈತ ಐಸಿಸ್ಗೆ ಸೇರ್ಪಡೆಯಾಗಿರಬಹುದು ಎಂದು ಹೇಳಲಾಗಿತ್ತು. ಈತ ಈಗ ತಾನು ಐಸಿಸ್ ಸೇರ್ಪಡೆಯಾಗಿರುವುದಾಗಿ ಸಂದೇಶ ರವಾನಿಸಿರುವುದರಿಂದ ಈ ವಿಚಾರ ಈಗ ದೃಢಪಟ್ಟಿದೆ.
ಈತ ತನ್ನ ಕುಟುಂಬಸ್ಥರಿಗೆ ಜೂನ್ ಕೊನೆಯಲ್ಲಿ ಸಂದೇಶ ಕಳುಹಿಸಿದ್ದ. ಮಧ್ಯಪ್ರಾಚ್ಯದಲ್ಲಿ ಇರುವುದಾಗಿ ತಿಳಿಸಿದ್ದ. ಈ ವಿಷಯ ಈಗ ಬೆಳಕಿಗೆ ಬಂದಿದ್ದು, ಈತನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಾಶ್ಮೀರ, ಗುಜರಾತ್ ಮತ್ತು ಮುಜಫರ್ನಗರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮುಸ್ಲಿಮರಿಗೆ ಸಹಕಾರ ನೀಡಲು ಐಸಿಸ್ನೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇನೆ. ಕೆಲಸ ಮುಗಿದ ನಂತರ ನಾನು ವಾಪಸ್ಸಾಗುತ್ತೇನೆ. ನಾನಿರುವಲ್ಲಿ, ಅಮೆರಿಕ ಮತ್ತು ರಷ್ಯಾ ಸಣ್ಣ ಮಕ್ಕಳನ್ನೂ ಸಹ ಬಾಂಬ್ ಹಾಕಿ ಕೊಲ್ಲುತ್ತಿದೆ ಎಂದು ಮಾರ್ವನ್ ತನ್ನ ಸಂದೇಶದಲ್ಲಿ ತಿಳಿಸಿದ್ದಾನೆ.
ಐಸಿಸ್ ನಿಯಂತ್ರಿತ ಪ್ರದೇಶಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಇಲ್ಲಿ ವಾಸಿಸುತ್ತಿರುವ ಮುಸ್ಲಿಮರಿಗೆ ಯಾವುದೇ ಮೂಲಸೌಕರ್ಯಗಳಿಲ್ಲ. ಆದರೂ ಇಲ್ಲಿರುವ ಜನರು ಅಲ್ಲಾನನ್ನು ನಂಬುತ್ತಾರೆ, ಅವರು ಅದರಲ್ಲೇ ಸಂತೋಷ ಕಂಡು ಕೊಂಡಿದ್ದಾರೆ ಎಂದಿದ್ದಾನೆ.
ಜನರು ನಮ್ಮನ್ನು ಭಯೋತ್ಪಾದಕರು ಎಂದು ಕರೆಯುತ್ತಿದ್ದಾರೆ. ಅಲ್ಲಾನಿಗಾಗಿ ಹೋರಾಟ ಮಾಡುತ್ತಿರುವ ನಮ್ಮನ್ನು ಭಯೋತ್ಪಾದಕರು ಎಂದು ಕರೆದರೆ ನಾವು ಭಯೋತ್ಪಾದಕೆರೆ ಎಂದು ಸಂದೇಶದಲ್ಲಿ ಬರೆದಿದ್ದಾನೆ.
ಐಸಿಸ್ಗೆ ಸೇರಲು ನನಗೆ ಯಾರೂ ಪ್ರೇರಣೆ ನೀಡಿಲ್ಲ. ಐಸಿಸ್ ಕುರಿತು ವರದಿಗಳನ್ನು ಓದಿದ ನಾನು ಐಸಿಸ್ ಜತೆಗೆ ಸೇರಿ ಹೋರಾಡಲು ಬಂದಿದ್ದೇನೆ ಎಂದು ಆತ ತನ್ನ ಸಂದೇಶದಲ್ಲಿ ತಿಳಿಸಿದ್ದಾನೆ.
ಕಾಣೆಯಾಗಿರುವ ಇನ್ನೊಬ್ಬ ಡಾ.ಇಜಾಜ್ ಎಂಬಾತ ಸಹ ತನ್ನ ಕುಟುಂಬಸ್ಥರಿಗೆ ತಾನು ಐಸಿಸ್ಗೆ ಸೇರ್ಪಡೆಯಾಗಿರುವುದಾಗಿ ಜುಲೈ ಪ್ರಾರಂಭದಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ.