ನವದೆಹಲಿ : ದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯೊತ್ಸವ ಸಮಾರಂಭಕ್ಕೆ ಇದೇ ಮೊದಲ ಬಾರಿಗೆ ಭಾರಿ ಭದ್ರತೆ ಒದಗಿಸಲಾಗಿದೆ. ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಇದೀಗ ಅಂತಿಮ ಹಂತದ ನಿರ್ದೇಶನ ನೀಡುತ್ತಿದ್ದಾರೆ.
ಜನನಿಬಿಡ ಪ್ರದೇಶಗಳನ್ನು ಗುರಿಯಾ ಗಿರಿಸಿಕೊಂಡು ಭಯೋತ್ಪಾದಕ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಂಪುಕೋಟೆಗೆ ಹೈಟೆಕ್ ಮಾದರಿಯಲ್ಲಿ ಭದ್ರತೆ ಒದಗಿಸಲಾಗಿದೆ.
ಕೆಂಪುಕೋಟೆಯಲ್ಲಿ ನಡೆಯುವ ಕಾರ್ಯಕ್ರಮಕ್ಕಾಗಿ ಹೆಚ್ಚುವರಿಯಾಗಿ 7 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಈ ಪೈಕಿ 5 ಸಾವಿರ ದೆಹಲಿ ಪೊಲೀಸರು, ಅರೆಸೇನಾಪಡೆಯ 2 ಸಾವಿರ ಸಿಬ್ಬಂದಿ ಕಾವಲು ಕಾಯಲಿದ್ದಾರೆ.
ವಾಯುದಾಳಿಯನ್ನು ತಡೆಯುವ ನಿಟ್ಟಿನಲ್ಲಿ ಎನ್ಎಸ್ಜಿ ಕಮಾಂಡೋ ಹಾಗೂ ವಿಶೇಷ ಭದ್ರತಾ ಪಡೆಯನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಎನ್ಎಸ್ಜಿ ಪಡೆಯನ್ನು ಬಳಸಿಕೊಳ್ಳುತ್ತಿರುವುದು ಇದೇ ಮೊದಲು. ರಾಜಪಥದ ಸುತ್ತಲಿರುವ 9 ಸಾವಿರ ನಿವಾಸಿಗಳ ಮಾಹಿತಿ ಕಲೆಹಾಕಿರುವ ಪೊಲೀಸರು, ಅಪರಿಚಿತ ವ್ಯಕ್ತಿಗಳ ಮೇಲೆ ನಿಗಾವಹಿಸಲಿದ್ದಾರೆ.
ರೇಸ್ಕೋರ್ಸ್ನಲ್ಲಿರುವ ಪ್ರಧಾನಿ ನಿವಾಸದಿಂದ ಕೆಂಪೊಕೋಟೆ ವರೆಗೂ ಸಿಸಿಟಿವಿ ಅಳವಡಿಸಲಾಗಿದೆ. ಟ್ರಕ್ ದಾಳಿಯ ಆತಂಕವಿರುವ ಹಿನ್ನೆಲೆಯಲ್ಲಿ ವೇಗವಾಗಿ ಮುನ್ನುಗ್ಗುವ ವಾಹನಗಳನ್ನು ತಡೆಯಲು 35 ಕಡೆ ಟೈರ್ ಕಿಲ್ಲರ್ಗಳನ್ನು ಅಳವಡಿಸಲಾಗಿದೆ. ಕೆಂಪುಕೋಟೆ ಸುತ್ತ 5 ಕಿ.ಮೀ. ಕಣ್ಣಿಡುವ ತಲಾ 1 ಕೋಟಿ ರೂ. ಮೊತ್ತದ 100 ಜೂಮ್ ಸಾಮರ್ಥ್ಯ ಹೊಂದಿರುವ 2 ಎಚ್ಡಿ ಕ್ಯಾಮರಾ ತರಿಸಲಾಗಿದೆ ಎಂದು ಉತ್ತರ ವಲಯದ ಡಿಸಿಪಿ ಮಧುರ್ ವರ್ವ ತಿಳಿಸಿದ್ದಾರೆ. ತುರ್ತು ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ 73 ಆಂಬುಲೆನ್ಸ್ ನಿಯೋಜಿಸಲಾಗುತ್ತದೆ.
ಡ್ರೋನ್ ದಾಳಿ ತಡೆಯುವ ನಿಟ್ಟಿನಲ್ಲಿ ಇದೇ ಮೊದಲ ಬಾರಿ ಎನ್ಎಸ್ಜಿ ವಿಶೇಷ ಯೋಜನೆಯೊಂದನ್ನು ರೂಪಿಸಿದೆ. 115 ಕಣ್ಗಾವಲು ಕೇಂದ್ರಗಳನ್ನು ಸ್ಥಾಪಿಸಿದ್ದು, ಒಂದೊಮ್ಮೆ ದಾಳಿ ನಡೆದರೆ ಕ್ಷಿಪ್ರಗತಿಯಲ್ಲಿ ಪ್ರಧಾನಿಯನ್ನು ಪಾರು ಮಾಡುವ ತಂತ್ರ ಕೂಡ ಹೆಣೆಯಲಾಗಿದೆ.