ನವದೆಹಲಿ : ಕರ್ನಾಟಕದಿಂದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಗೆ ಸೇರಿದ್ದ ಮೂವರು ಯುವಕರು, ಇರಾಕ್ ಮತ್ತು ಸಿರಿಯಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಮೃತಪಟ್ಟಿದ್ದಾರೆ. ಅವರಲ್ಲಿ ಇಬ್ಬರು ಬೆಂಗಳೂರಿನವರಾಗಿದ್ದಾರೆ
ದೆಹಲಿಯಿಂದ ಇತ್ತೀಚಿಗಷ್ಟೆ ಬಂದಿರುವ ಗುಪ್ತಚರ ಸಂಸ್ಥೆಯ ವರದಿಯಲ್ಲಿ ಈ ಯುವಕರು ಎರಡು ವರ್ಷದ ಮುಂಚೆಯೇ ಇಸ್ಲಾಮಿಕ್ ಸ್ಟೇಟ್ ಸೇರಿದ್ದು, ಇರಾಕ್ ಮತ್ತು ಸಿರಿಯಾದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಸಾವನ್ನಪ್ಪಿರುವವರನ್ನು ಬೆಂಗಳೂರು ಮೂಲದ ಕಾಕ್ಸ್ಟೌನ್ ನಿವಾಸಿ ಫಯಾಜ್ ಮಸೂದ್, ಶಿವಾಜಿನಗರ ಉಮರ್ ಸುಬಾನ್ ಹಾಗೂ ವಿಜಯಪುರದ ಅಬ್ದುಲ್ ಖುದ್ದುಸ್ ಟರ್ಕಿ ಎಂದು ಗುರುತಿಸಲಾಗಿದೆ.
ಈ ಮೂವರು ಶಂಕಿತ ಉಗ್ರರು ನಕಲಿ ಪಾಸ್ ಪೋರ್ಟ್ ಪಡೆದು ಸಿರಿಯಾ ಹಾಗೂ ಇರಾಕ್ ಪರ ಹೋರಾಟ ನಡೆಸಲು ಐಸಿಸ್ ಉಗ್ರಗಾಮಿ ಸಂಘಟನೆ ಸೇರಿಕೊಂಡಿದ್ದರೆಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಕಾಕ್ಸ್ಟೌನ್ ನಿವಾಸಿಯಾದ ಫಯಾಜ್ ಮಸೂದ್, ಕತಾರ್ ನಲ್ಲಿ ಖಾಸಗಿ ಕೆಲಸ ನಿಮಿತ್ತ 2013ರ ಸೆಪ್ಟೆಂಬರ್ ನಲ್ಲಿ ತೆರಳಿದ್ದ. ಅಲ್ಲಿಂದ ಕಳೆದ ವರ್ಷ ಬೆಂಗಳೂರಿಗೆ ಬಂದು ಪುನಃ ಪಾಸ್ ಪೋರ್ಟ್ ನವೀಕರಿಸಿಕೊಂಡಿದ್ದ. ಕತಾರ್ ನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆಂದು ಕುಟುಂಬದ ಸದಸ್ಯರಿಗೆ ತಿಳಿಸಿದ್ದು, ಈತ ಅಲ್ಲಿಂದ ಸಿರಿಯಾಗೆ ತೆರಳಿ ಐಸಿಸ್ ಉಗ್ರಗಾಮಿ ಸಂಘಟನೆಗೆ ಸೇರ್ಪಡೆಗೊಂಡ.
ಇದೇ ರೀತಿ ಶಿವಾಜಿನಗರದ ನಿವಾಸಿ ಉಮರ್ ಸುಬಾನ್ ಯೆಮೆನ್ ನಲ್ಲಿ ಖಾಸಗಿ ಕಂಪನಿಯೊಂದರ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ. ಈತನೂ ಕೂಡ ಐಸಿಸ್ 2013ರ ಅಂತ್ಯಕ್ಕೆ ಇರಾಕ್ ತೆರಳಿ ಐಸಿಸ್ ಗೆ ಸೇರ್ಪಡೆಯಾಗಿದ್ದ ಎಂದು ಗುಪ್ತಚರ ಇಲಾಖೆಯ ಮೂಲಗಳು ಖಚಿತಪಡಿಸಿವೆ. ವಿಜಯಪುರದ ನಿವಾಸಿಯಾದ ಅಬ್ದುಲ್ ಖುದ್ದುಸ್ ಟರ್ಕಿ, ಫಯಾಜ್ ಮಸೂದ್ ಹಾಗೂ ಉಮರ್ ಸುಬಾನ್ ಸಂಪರ್ಕ ಬೆಳೆಸಿಕೊಂಡು ನಕಲಿ ಪಾಸ್ ಪೋರ್ಟ್ ಮೂಲಕ ಬಾಗ್ದಾದ್ಗೆ ತೆರಳಿದ್ದ ಎಂದು ತಿಳಿದುಬಂದಿದೆ.