ನವದೆಹಲಿ : ಐಸಿಸ್ ಉಗ್ರರ ಸಂಪರ್ಕ ಹೊಂದಿದ್ದಾರೆಂಬ ಶಂಕೆ ಮೇರೆಗೆ ಬಂಧನಕ್ಕೊಳಗಾಗಿದ್ದ ನಾಲ್ವರು ಭಾರತೀಯರನ್ನು ಸಿರಿಯಾ ಸರ್ಕಾರ ಬಿಡುಗಡೆ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಈ ಕುರಿತಂತೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಅವರು, ಸಿರಿಯಾದಲ್ಲಿ ಬಂಧನಕ್ಕೊಳಗಾಗಿದ್ದ ನಾಲ್ವರು ಭಾರತಿಯರನ್ನು ಬಿಡುಗಡೆ ಮಾಡಲಾಗಿದ್ದು, ರಕ್ಷಣೆಮಾಡಲಾಗಿದೆ ಎಂದು ಹೇಳಿದ್ದಾರೆ. ಸಿರಿಯಾ ಪ್ರಧಾನಿ ಈ ವರ್ಷದ ಮೊದಲ ತಿಂಗಳಲ್ಲಿ ಭಾರತಕ್ಕೆ ಬಂದಾಗ ಭಾರತೀಯರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿತ್ತು. ಇದರಂತೆ ಇಂದು 4 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ. ಸಿರಿಯಾ ಸರ್ಕಾರಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಇನ್ನು ಬಿಡುಗಡೆ ಗೊಂಡಿರುವವರನ್ನು ಅರುಣ್ ಕುಮಾರ್ ಸೈನಿ, ಸರ್ವಿಜಿತ್ ಸಿಂಗ್, ಕುಲ್ದೀಪ್ ಸಿಂಗ್ ಹಾಗೂ ಜೋಗ ಸಿಂಗ್ ಎಂದು ಹೇಳಲಾಗುತ್ತಿದೆ. ಖಾಸಗಿ ಮಾಧ್ಯಮದ ವರದಿ ಪ್ರಕಾರ, ಈ ಹಿಂದೆ ಈ ನಾಲ್ವರು ಜಾರ್ಡಾನ್ ನಿಂದ ಸಿರಿಯಾಗೆ ಆಗಮಿಸಿದ್ದು, ಐಸಿಸ್ ಸೇರಲು ಯತ್ನಿಸುತ್ತಿದ್ದಾರೆಂದು ಶಂಕಿಸಿ ಸಿರಿಯಾ ಸರ್ಕಾರ ಬಂಧನಕ್ಕೊಳಪಡಿಸಿತ್ತು ಎಂದು ಹೇಳಿತ್ತು. ನಂತರ ಇವರು ಐಸಿಸ್ ಗೆ ಸೇರಲು ಯತ್ನಿಸಿಲ್ಲ, ತಪ್ಪು ದಾಖಲೆಗಳನ್ನು ಹೊಂದಿ ಅಕ್ರಮ ವಲಸೆ ಮಾಡುತ್ತಿದ್ದರು ಎಂದು ಹೇಳಲಾಗಿತ್ತು. ಇದೀಗ ಸಿರಿಯಾ ಸರ್ಕಾರ ನಾಲ್ವರು ಭಾರತೀಯರನ್ನು ಬಿಡುಗಡೆ ಮಾಡಿದೆ.