ನವದೆಹಲಿ : ಸೌದಿ ಅರೇಬಿಯಾದಲ್ಲಿ ಉದ್ಯೋಗ ಕಳೆದುಕೊಂಡಿರುವ 10 ಸಾವಿರ ಭಾರತೀಯ ನೌಕರರನ್ನು ಸುರಕ್ಷಿತವಾಗಿ ವಾಪಸ್ಸು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಈ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಅವರು, ಸೌದಿಯಲ್ಲಿ ಉದ್ಯೋಗ ಕಳೆದುಕೊಂಡಿರುವ ಭಾರತೀಯರಿಗೆ ಸಧ್ಯ ಶಿಬಿರಗಳ ಮೂಲಕ ಆಹಾರ ಒದಗಿಸಲಾಗುತ್ತಿದೆ ಎಂದರು. ಭಾರತೀಯರನ್ನು ವಾಪಸ್ ಕರೆತರುವ ಸಲುವಾಗಿ ಎಲ್ಲಾ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಸೌದಿ ಅರೇಬಿಯಾಕ್ಕೆ ನಾಳೆ ಭೇಟಿ ನೀಡಲಿದ್ದಾರೆ ಎಂದು ವಿವರಿಸಿದರು.
ಸೌದಿ ಅರೇಬಿಯಾದಲ್ಲಿರುವ ಭಾರತೀಯರ ಕುರಿತು ಗಂಟೆಗೊಮ್ಮೆ ಮಾಹಿತಿ ಕಲೆಹಾಕಲಾಗುತ್ತಿದ್ದು, ಅಲ್ಲಿನ ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗಿದೆ. ಮುಂದಿನ 10 ದಿನಗಳಲ್ಲಿ ಭಾರತೀಯರ ಎಲ್ಲಾ 5 ಶಿಬಿರಗಳಿಗೆ ಆಹಾರದ ಪೊಟ್ಟಣ ಒದಗಿಸಲಾಗುವುದು ಎಂದರು.
ಅಲ್ಲಿನ ಕಂಪೆನಿಗಳು ಕಾರ್ಖಾನೆಗಳಿಗೆ ಬೀಗ ಹಾಕಿ ಹೋಗಿವೆ. ಇದರಿಂದ ಕೆಲಸ ಕಳೆದುಕೊಂಡಿರುವುದಲ್ಲದೇ ವೇತನ ಪಾವತಿಯೂ ಆಗಿಲ್ಲ. ಕಂಪೆನಿಗಳು ಸರ್ಕಾರಕ್ಕೆ ಕಟ್ಟಬೇಕಾದ ಹಣ ಬಾಕಿಯಿದೆ. ಗುತ್ತಿಗೆಗೆ ಸಹಿ ಹಾಕುವಂತೆ ನಾನು ಕಾರ್ಮಿಕ ಇಲಾಖೆಯನ್ನು ಕೋರಿದ್ದೇನೆ. ಕಂಪೆನಿ ಸರ್ಕಾರಕ್ಕೆ ಕಟ್ಟಬೇಕಾದ ಹಣವನ್ನು ಕಟ್ಟುವ ಮೊದಲು, ಈ ನೌಕರರಿಗೆ ವೇತನ ನೀಡಲಿ ಎಂದು ಆಗ್ರಹಿಸಿದರು. ವಿ.ಕೆ.ಸಿಂಗ್ ಅವರು ರಿಯಾದ್ ತಲುಪಿದ ನಂತರ ಎಲ್ಲಾ ಔಪಚಾರಿಕ ಕ್ರಮ ಮುಗಿಯಲಿದ್ದು, ಅಲ್ಲಿರುವ ಭಾರತೀಯರನ್ನು ಕರೆತರಲಾಗುವುದು ಎಂದು ತಿಳಿಸಿದರು.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಸೌದಿಯ ನಿರ್ಮಾಣ ಕೈಗಾರಿಕೆಗಳ ವ್ಯಾಪಾರ, ವಹಿವಾಟಿನಲ್ಲಿ ಕುಂಠಿತವಾಗಿದ್ದು, ಸೌದಿಯ ಪ್ರಮುಖ ನಿರ್ಮಾಣ ಕಂಪೆನಿಯಾದ ಸೌದಿ ಒಗರ್ ನಲ್ಲಿನ ಕೆಲಸಗಾರರನ್ನು ತೆಗೆದುಹಾಕಲಾಗಿದೆ. ಇದರಿಂದ ಸಾವಿರಾರು ಮಂದಿ ಭಾರತೀಯ ನೌಕರರು ಸೇರಿದಂತೆ ಹಲವರು ಕೆಲಸ ಕಳೆದುಕೊಂಡಿದ್ದಾರೆ.