ಹೈದ್ರಾಬಾದ್ : ತೆಲಂಗಾಣ ವಿಧಾನಪರಿಷತ್ ಚುನಾವಣೆಯಲ್ಲಿ ತೆಲುಗುದೇಶಂ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ನಾಮನಿರ್ದೇಶಿತ ಶಾಸಕ ಎಲ್ವಿಸ್ ಸ್ಟೀಫನ್ಸನ್ ಎಂಬುವರಿಗೆ ದೂರವಾಣಿ ಮುಖೇನ ಆಮಿಷವೊಡ್ಡಿದ್ದರು ಎನ್ನಲಾದ ಆಡಿಯೋ ಟೇಪ್ ಬಹಿರಂಗವಾಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ.
ಸ್ಟಿಫನ್ಸನ್ ಗೆ ಲಂಚದ ಆಮಿಷ ಒಡ್ಡಿದ ನಾಯ್ಡು ಧ್ವನಿ ಮಾದರಿಯ ಆಡಿಯೋ ಟೆಪ್ ನಿನ್ನೆ ಬಹಿರಂಗವಾಗಿತ್ತು. ನಾಯ್ಡು ಮುಖ್ಯಮಂತ್ರಿಯಾಗಿ ವರ್ಷ ಪೂರ್ಣಗೊಳ್ಳುತ್ತಿರುವಾಗಲೇ ಈ ಟೇಪ್ ಬಿಡುಗಡೆಯಾಗಿರುವುದು ಗಮನಾರ್ಹ.
ಆಡಿಯೋ ಟೇಪ್ ಲ್ಲಿ ಇರುವ ಧ್ವನಿ ನಾಯ್ಡು ಅವರದ್ದೇ ಎಂಬುದು ದೃಢಪಟ್ಟಿಲ್ಲ. ಆಡಿಯೋ ಟೇಪ್ ಬಹಿರಂಗವಾಗುತ್ತಿದ್ದಂತೆ ಚಂದ್ರಬಾಬು ನಾಯ್ಡು ಅವರು ಉನ್ನತ ತುರ್ತು ಸಭೆ ನಡೆಸಿದ್ದಾರೆ. ಇದೊಂದು ಸುಳ್ಳು ಆಡಿಯೋ ಟೇಪ್ ಎಂದು ಕಿಡಿಕಾರಿದ್ದಾರೆ. ಆಡಿಯೋ ಟೇಪ್ ಲ್ಲಿರುವ ಧ್ವನಿ ನಾಯ್ಡು ಅವರದ್ದಲ್ಲ. ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದು ಆಂಧ್ರ ಸರ್ಕಾರದ ಸಲಹೆಗಾರ ಪರಕಾಲ ಪ್ರಭಾಕರ್ ಸ್ಪಷ್ಟಪಡಿಸಿದ್ದಾರೆ.
ತಮ್ಮ ವಿರುದ್ಧ ಆಡಿಯೋ ಟೇಪ್ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಬಾಬು ನಾಯ್ಡು, ರಾಜ್ಯಪಾಲರಿಗೆ ದೂರು ನೀಡಿದ್ದು, ರಿಲೀಸ್ ಆದ ಆಡಿಯೋ ಟೇಪ್ ನಲ್ಲಿರುವ ಧ್ವನಿ ನನ್ನದಲ್ಲ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಡಿಪಿ ಬೆಂಬಲಿಗರು ಹಾಗೂ ಹಲವು ವಕೀಲರು, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ವಿರುದ್ಧ ದೂರು ದಾಖಲುಮಾಡಿದ್ದಾರೆ. ಆಂಧ್ರದ ಗುಂಟೂರು, ವಿಶಾಖಪಟ್ಟಣಂ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೆಸಿಆರ್ ವಿರುದ್ಧ ದೂರು ದಾಖಲಾಗಿದ್ದು, ತೆಲಂಗಾಣ ಟಿಆರ್ ಎಸ್ ಸರ್ಕಾರದಿಂದ ಸಿಎಂ ನಾಯ್ಡು ವಿರುದ್ಧ ವ್ಯವಸ್ಥಿತ ಕುತಂತ್ರ ಮಾಡಲಾಗಿದೆ. ನಾಯ್ಡು ಅವರ ನೈತಿಕ ಸ್ಥೈರ್ಯ ಕುಗ್ಗಿಸಲು ಈ ರೀತಿ ತಂತ್ರ ರೂಪಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.