ನವದೆಹಲಿ : ಆಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಒಪ್ಪಂದಕ್ಕೆ ಪಡೆದ ಲಂಚದ ಹಣವನ್ನು ಸೋನಿಯಾ ಗಾಂಧಿ ಎಲ್ಲಿಟ್ಟಿದ್ದಾರೆಂಬುದು ತಮಗೆ ಗೊತ್ತು ಎನ್ನುವುದರ ಮೂಲಕ ಬಿಜೆಪಿ ಸಂಸದ ಸುಬ್ರಮಣ್ಯಂ ಸ್ವಾಮಿ ಮತ್ತೊಂದು ಮಹತ್ವದ ವಿಷಯ ಬಹಿರಂಗಗೊಳಿಸಿದ್ದಾರೆ.
ಲಂಚದ ಹಣವನ್ನು ಸೋನಿಯಾ ಗಾಂಧಿ ಅವರು ಜಿನೆವಾದ ಸಾರಸಿನ್ ಬ್ಯಾಂಕ್ ನಲ್ಲಿ ಇಟ್ಟಿದ್ದಾರೆ ಎಂದು ಸುಬ್ರಮಣ್ಯ ಸ್ವಾಮಿ ಹೇಳಿದ್ದಾರೆ. ಲಂಚದ ಸ್ವಲ್ಪ ಭಾಗವನ್ನು ಪಿಕ್ಟೆಟ್ ಬ್ಯಾಂಕ್ ನಲ್ಲಿ ಸಹ ಇಟ್ಟಿದ್ದಾರೆ ಎಂದು ಸುಬ್ರಮಣ್ಯ ಸ್ವಾಮಿ ಎಬಿಪಿ ಸುದ್ದಿ ವಾಹಿನಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ಈಗ ಜಾರಿ ನಿರ್ದೇಶನಾಲಯ ಸಾರಸಿನ್ ಬ್ಯಾಂಕ್ ಮತ್ತು ಪಿಕ್ಟೆಟ್ ಬ್ಯಾಂಕ್ ನ ವಿವರದ ಮೇಲೆ ತನಿಖೆ ನಡೆಸಬೇಕೆಂದು ಸ್ವಾಮಿ ಆಗ್ರಹಿಸಿದ್ದಾರೆ.
ಈ ಮೊದಲು ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಪ್ರಕರಣದ ಕುರಿತು ಇಟಲಿ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಸೋನಿಯಾ ಗಾಂಧಿ ಹೆಸರು ಉಲ್ಲೇಖವಾಗಿತ್ತು. ಇದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಸೋನಿಯಾ ಗಾಂಧಿ ಹೆಸರಿನ ಜೊತೆ ಮಾಜಿ ಪ್ರಧಾನಿ ಮನಮೋಹನ ಸಿಂಗ್, ಆಸ್ಕರ್ ಫರ್ನಾಂಡೀಸ್, ಅಹಮದ್ ಪಟೇಲ್ ಹೆಸರೂ ಸಹ ಉಲ್ಲೇಖವಾಗಿತ್ತು.