ಜಮ್ಮು-ಕಾಶ್ಮೀರ : ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ವೈಷ್ಣೋದೇವಿ ದರ್ಶನಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವೇಳೆಯಲ್ಲಿ ಹೆಲಿಕಾಪ್ಟರ್ ಪತನವಾಗಿರುವ ದುರ್ಘಟನೆ ಜಮ್ಮು ಕಾಶ್ಮೀರದ ಕಾಟ್ರಾ ಬಳಿ ಸೋಮವಾರ ಸಂಭವಿಸಿದ್ದು, ಘಟನೆಯಲ್ಲಿ ಮಹಿಳಾ ಪೈಲಟ್ ಸೇರಿ ಏಳು ಮಂದಿ ಸಾವನ್ನಪ್ಪಿದ್ದಾರೆ.
ಹಿಮಾಲಯ ಹೆಲಿ ಸರ್ವಿಸ್ ಖಾಸಗಿ ಸಂಸ್ಥೆಯ ಈ ಹೆಲಿಕಾಪ್ಟರ್ ನಲ್ಲಿ ಆರು ಮಂದಿ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದರು. ಸಾಂಜಿಚಾಟ್ ನಿಂದ ಕಾಟ್ರಾಗೆ ಬರುತ್ತಿದ್ದ ವೇಳೆ ವಿಪರೀತ ಮಂಜು ಮುಸುಕಿದ ವಾತಾವರಣದಿಂದಾಗಿ ಹೆಲಿಕಾಪ್ಟರ್ ಪತನಕ್ಕೀಡಾಗಿತ್ತು. ಹೆಲಿಕಾಪ್ಟರ್ ಕೆಳಗೆ ಬಿದ್ದ ನಂತರ ಬೆಂಕಿ ಹೊತ್ತಿಕೊಂಡಿರುವುದಾಗಿ ವರದಿ ತಿಳಿಸಿದೆ.
ಹೆಲಿಕಾಪ್ಟರ್ ಪೈಲಟ್ ಸುಮಿತ್ರ ವಿಜಯನ್ ಸೇರಿದಂತೆ ಏಳು ಮಂದಿ ಸಾವಿಗೀಡಾಗಿದ್ದಾರೆ. ಶವಗಳನ್ನು ಹೊರತೆಗೆಯಲಾಗಿದ್ದು, ಸಾವನ್ನಪ್ಪಿದ ಪ್ರಯಾಣಿಕರಲ್ಲಿ ಮೂವರು ದೆಹಲಿ ಮತ್ತು ಇಬ್ಬರು ಜಮ್ಮುವಿನವರೆಂದು ತಿಳಿದು ಬಂದಿದೆ.