ನವದೆಹಲಿ : ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ರಾಹುಲ್ ಅವರ ನಿವಾಸದಲ್ಲಿ ಚುನಾವಣಾ ಮೈತ್ರಿ ಕುರಿತಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಇನ್ನೊಂದೆಡೆ ಆರ್.ಜೆ.ಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರು ದೆಹಲಿಗೆ ಆಗಮಿಸಿದ್ದು ಅವರೂ ಸಹ ಮಾತುಕತೆ ನಡೆಸುವ ಸಾದ್ಯತೆಗಳಿವೆ ಎಂದು ಹೇಲಲಾಗುತ್ತಿದೆ.
ವರ್ಷಾಂತ್ಯಕ್ಕೆ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದ್ದು ,ಆಡಳಿತಾರೂಢ ಜೆಡಿಯು ಅಧಿಕಾರ ಉಳಿಸುವ ನಿಟ್ಟಿನಲ್ಲಿ, ಬಿಜೆಪಿ ಮೈತ್ರಿಕೂಟವನ್ನು ಎದುರಿಸಲು ಭಾರೀ ಕಸರತ್ತು ನಡೆಸುತ್ತಿದೆ.
ಈಗಾಗಲೇ ಜನತಾ ಪರಿವಾರ ವಿಲೀನದ ಬಗ್ಗೆ ಘೋಷಿಸಲಾಗಿದೆಯಾದರೂ ಬಿಹಾರ ವಿಧಾನಸಭಾ ಚುನಾವಣೆಯ ನಂತರ ವಿಲೀನ ನಡೆಸುವುದಾಗಿ ಹೇಳಲಾಗಿದೆ. ಅಲ್ಲದೆ ಆರ್.ಜೆ.ಡಿ ಮತ್ತು ಜೆಡಿಯು ಸ್ಥಾನ ಹೊಂದಾಣಿಕೆಯ ವಿಚಾರದಲ್ಲಿ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ.
ಒಂದು ವೇಳೆ ಜೆಡಿಯು-ಆರ್.ಜೆ.ಡಿ ನಡುವೆ ಮೈತ್ರಿ ಎರ್ಪಟ್ಟದ್ದೇ ಆದಲ್ಲಿ, ಬಿಹಾರದಲ್ಲಿ ಶೋಚನೀಯ ಸ್ಥಿತಿಯಲ್ಲಿರುವ ಕಾಂಗ್ರೆಸ್ ತನ್ನ ಅಸ್ಥಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎರಡೂ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಬಿಹಾರ ವಿಧಾನಸಭೆಯಲ್ಲಿ 243 ಸ್ಥಾನಗಳಿದ್ದು ತಲಾ 100 ಸ್ಥಾನಗಳಲ್ಲಿ ಆರ್.ಜೆ.ಡಿ ಮತ್ತು ಜೆಡಿಯು ಸ್ಪರ್ಧಿಸಲು ನಿರ್ಧರಿಸಿದ್ದು ,ಉಳಿದ 43 ಸ್ಥಾನಗಳನ್ನು ಕಾಂಗ್ರೆಸ್ ,ಸಿಪಿಐ (ಎಂ). ಸಿಪಿಐ ಮತ್ತು ಎನ್.ಸಿ.ಪಿಗೆ ಬಿಟ್ಟು ಕೊಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.