ನವದೆಹಲಿ : ನಮ್ಮ ಸರ್ಕಾರ ದೇಶದ ಸರ್ವಾಂಗೀಣ ಅಭಿವೃದ್ದಿಗಾಗಿ ಕೆಲಸಮಾಡುತ್ತಿದೆ. ಜನತೆ ನಮ್ಮ ಮೇಲಿರಿಸಿದ್ದ ವಿಶ್ವಾಸ ಎಳ್ಳಷ್ಟೂ ಕಡಿಮೆಯಾಗಿಲ್ಲ ,ನಮ್ಮ ಸರ್ಕಾರಕ್ಕೆ ಜನ ಫುಲ್ ಮಾರ್ಕ್ಸ್ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಆಕಾಶವಾಣಿಯಲ್ಲಿ 8 ನೇ ಬಾರಿಗೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಜನತೆ ರಣ ಬಿಸಿಲಿನಿಂದ ಕಂಗಾಲಾಗಿ ಹೋಗಿದ್ದಾರೆ, ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಬಿಸಿಲಿನ ತಾಪಕ್ಕೆ ಜನ ಜೀವನ ದುಸ್ಥರವಾಗಿದೆ. ಕೇವಲ ಮನುಷ್ಯ ಮಾತ್ರವಲ್ಲದೆ ಪಶು- ಪಕ್ಷಿಗಳು ಕಂಗಾಲಾಗಿ ಹೋಗಿದ್ದು ಅವುಗಳಿಗೆ ಕುಡಿಯಲು ನೀರು ಕೊಡಿ ಎಂದು ಈ ವೇಳೆ ಸಲಹೆ ನೀಡಿದರು.
ದೇಶದಲ್ಲಿ ಈಗ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದೆ. ವಿದ್ಯಾರ್ಥಿಗಳು ಶ್ರಮ ಪಟ್ಟು ಉತ್ತಮ ಸಾಧನೆ ಮಾಡಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಯೋಚಿಸಿ ಹೆಜ್ಜೆ ಇಟ್ಟು ದೇಶ ಸೇವೆ ಮಾಡುವತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಉತ್ತೀರ್ಣರಾದವರು ಯಾವುದೇ ಗೊಂದಲಕ್ಕೆ ಒಳಗಾಗದೆ ನಿಮ್ಮಿಷ್ಟದ ಕ್ಷೇತ್ರದಲ್ಲಿ ಮುಂದುವರಿಯಿರಿ . ಅನುತ್ತೀರ್ಣ ರಾದವರು ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಿ ದುಡುಕಿನ ನಿರ್ಧಾರಕೈಗೊಳ್ಳಬೇಡಿ ಎಂದು ಸಲಹೆ ನೀಡಿದ ಪ್ರಧಾನಿ ಮೋದಿ, ದೌರ್ಬಲ್ಯವನ್ನು ಬದಿಗಿಟ್ಟು ಮರಳಿ ಪ್ರಯತ್ನ ಮಾಡಿ ಯಶಸ್ಸು ಪಡೆಯಿರಿ ಎಂದು ಕಿವಿಮಾತು ಹೇಳಿದರು.
ಬಡವರ ಅಭಿವೃದ್ದಿಯೇ ನಮ್ಮ ಉದ್ದೇಶವಾಗಿದೆ. ಕೆಳಸ್ತರದಲ್ಲಿರುವ ಜನರನ್ನು ಮೇಲುಸ್ತರಕ್ಕೆ ತರುವುದು ನಮ್ಮ ಸರ್ಕಾರದ ಗುರಿಯಾಗಿದೆ. ಇದಕ್ಕಾಗಿ ಸಾಮಾಜಿಕ ಸುರಕ್ಷಾ ಯೋಜನೆಗಳನ್ನು ಜಾರಿ ಮಾಡಲಾಗಿದೆ. ನಮ್ಮ ಸರ್ಕಾರದ ಯೋಜನೆಗಳಿಂದ ಈಗಾಗಲೇ 8 ಕೋಟಿ ಜನರು ಲಾಭ ಪಡೆದಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ರೈತರ ಸರ್ವಾಂಗೀಣ ಅಭಿವೃದ್ದಿಗೆ ಯೋಜನೆಗಳನ್ನು ನಮ್ಮ ಸರ್ಕಾರ ರೂಪಿಸಿದೆ. ಕೃಷಿ ಕ್ಷೇತ್ರದಲ್ಲಿ ಆಧುನಿಕರಣದ ಅಗತ್ಯವಿದೆ. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಖರೀದಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಸರ್ಕಾರ ಆರಂಭಿಸಿರುವ ಕಿಸಾನ್ ವಾಹಿನಿಯಿಂದ ರೈತರು,ಮೀನುಗಾರರು ಪಶುಸಂಗೋಪನೆದಾರರಿಗೆ ತುಂಬಾ ಅನುಕೂಲವಾಗಿದೆ ಎಂದರು.
ಒನ್ ರಾಂಕ್ ಒನ್ ಪೆನ್ಶನ್ ಯೋಜನೆ ಜಾರಿಗೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಕಳೆದ 40 ವರ್ಷಗಲಿಂದ ಈ ಬಗ್ಗೆ ಚರ್ಚೆಗಳು ಮಾತ್ರ ನಡೆದಿದ್ದು ,ಯೋಜನೆ ಜಾರಿಯಾಗಿಲ್ಲ. ನಮ್ಮ ಸರ್ಕಾರ ಯಾವುದೇ ತಡೆಯಿಲ್ಲದೆ ಯೋಜನೆ ಜಾರಿ ಮಾಡಲಿದೆ ಎಂದು ನಿವೃತ್ತ ಸೈನಿಕರಿಗೆ ಮೋದಿ ಭರವಸೆ ನೀಡಿದರು.
ಇದೇ ವೇಳೆ ಜನರಿಗೆ ಆಂತರಿಕ ಪ್ರವಾಸಕೈಗೊಳ್ಳುವಂತೆ ಕರೆ ನೀಡಿದ ಮೋದಿ ಅವರು, ನಮ್ಮ ದೇಶ ವಿವಿಧತೆಯಿಂದ ಕೂಡಿದ್ದು ಪ್ರವಾಸಕೈಗೊಳ್ಳುವ ಮೂಲಕ ಅನೇಕ ವೈವಿಧ್ಯಗಳನ್ನು ನೋಡಬಹುದು, ವಿಚಾರಗಳನ್ನು ಕಲಿಯಬಹುದು ಎಂದರು.
ನೀವು ಪ್ರವಾಸ ಮಾಡಿದ ಅನುಭವಗಳನ್ನು ಮತ್ತು ಫೋಟೊಗಳನ್ನು #IncredibleIndia.ದಲ್ಲಿ ನನ್ನೊಂದಿಗೆ ಹಂಚಿಕೊಳ್ಳಿ ಎಂದು ಪ್ರವಾಸೋದ್ಯಮಕ್ಕೆ ಉತ್ತೇಜ ನೀಡಲು ಕರೆ ನೀಡಿದರು.