ಬೆಂಗಳೂರು : ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಮುಂದುವರಿದಿರುವ ಹಿನ್ನಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ರೇಡಿಯೋ ಮೂಲಕ ರೈತರನ್ನು ಉದ್ದೇಶಿಸಿ ಮಾತನಾಡಿ, ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಶರಣಾಗಬೇಡಿ ಎಂದರು.
ಆಕಾಶವಾಣಿ ಮೂಲಕ ಭಾಷಣ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರೈತನ ಸಾವು ನನಗೆ ತೀವ್ರ ನೋವು ತಂದಿದೆ, ಇದರಿಂದ ಬಹಳ ನೊಂದಿದ್ದೇನೆ. ರೈತನ ಮಗನಾಗಿ ಇನ್ನೊಬ್ಬ ರೈತನ ನೋವು, ಕಷ್ಟ ನನಗೆ ಅರ್ಥವಾಗುತ್ತೆ, ಆದರೆ ಆತ್ಮಹತ್ಯೆ ಇದಕ್ಕೆ ಪರಿಹಾರವಲ್ಲ. ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ತಕ್ಷಣಕ್ಕೆ ಅನುಕೂಲವಾಗುವಂತೆ ಎರಡು ಲಕ್ಷ ರೂಪಾಯಿ ಪರಿಹಾರ ಘೊಷಿಸಿದ್ದೇವೆ. ನೊಂದ ರೈತರಿಗೆ ಸಾಂತ್ವನ ಹೇಳುವ ಸಮಯ ಇದಾಗಿದೆ. ರೈತರನ್ನು ಪ್ರಚೋದಿಸುವ, ಎತ್ತಿಕಟ್ಟು ಕಾಲ ಇದಲ್ಲ. 2013-14ನೇ ಸಾಲಿನಲ್ಲಿ 58 ರೈತರು ಆತ್ಮಹತ್ಯೆಗೆ ಶರಣಾಗಿದ್ದರು. 2014-15ನೇ ಸಾಲಿನಲ್ಲಿ 48 ರೈತರು, ಆದರೆ ಈ ಸಾಲಿನಲ್ಲಿ ಈಗಾಗಲೇ 70ಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿರುವುದು ಆತಂಕಕಾರಿ ವಿಚಾರ. ರೈತರ ಆತ್ಮಹತ್ಯೆ ನನಗೆ ಅತೀವ ನೋವು ತರಿಸಿದೆ. ಹಾಗಾಗಿ ಮೃತ ರೈತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವಂತೆ ಸಚಿವರಿಗೆ, ಶಾಸಕರಿಗೆ ಸೂಚಿಸಿದ್ದೇನೆ ಎಂದರು.
ಯಾವುದೇ ಕಾರಣಕ್ಕೂ ಆತ್ಮಹತ್ಯೆ ಶರಣಾಗಬೇಡಿ. ನಿಮ್ಮ ತಂದೆ, ತಾಯಿ, ಮಡದಿ, ಮಕ್ಕಳನ್ನು ನೆನಪಿಸಿಕೊಳ್ಳಿ. ನಿಮ್ಮ ಕಷ್ಟಗಳನ್ನು ನಮ್ಮೊಡನೆ ಹಂಚಿಕೊಳ್ಳಿ ಎಂದು ಹೇಳಿದರು.ಅಧಿಕಾರ ಇದ್ದರು ಇಲ್ಲದಿದ್ದರೂ ನಾನು ರೈತರ ಪರವಾಗಿರುತ್ತೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಇತ್ತೀಚೆಗೆ ರೈತರ ಸರಣಿ ಆತ್ಮಹತ್ಯೆ ನಡೆಯತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ರೈತರಿಗೆ ಧೈರ್ಯ ತುಂಬಲು ರೇಡಿಯೋ ಮೂಲಕ ಭಾಷಣ ಮಾಡಿದ್ದಾರೆ. ಬೆಳಗ್ಗೆ 8.35ಕ್ಕೆ ಭಾಷಣ ಆರಂಭಿಸಿದ ಸಿದ್ದರಾಮಯ್ಯ ರೈತರಿಗೆ ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವಿ ಮಾಡಿದ್ದಾರೆ.