ನವದೆಹಲಿ : ಯುಪಿಎ ಸರ್ಕಾರದ ಅವಧಿಯಲ್ಲಿ ಟ್ರಾಯ್ ಮಾಜಿ ಅಧ್ಯಕ್ಷ ಪ್ರದೀಪ್ ಬೈಜಾಲ್ ಅವರು ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ವಿರುದ್ಧ ಪ್ರದೀಪ್ ಬೈಜಾಲ್ ಆರೋಪಕ್ಕೆ ಪ್ರತಿಕ್ರಿಯಿಸಿದ ಜೇಟ್ಲಿ, 'ಬೈಜಾಲ್ ಅವರು ನನ್ನ ಜೊತೆನೂ ಕೆಲಸ ಮಾಡಿದ್ದಾರೆ. ಅವರು ಒಬ್ಬ ದಕ್ಷ ಮತ್ತು ಉತ್ತಮ ಅಧಿಕಾರಿ' ಎಂದು ಹೇಳಿದ್ದಾರೆ.
ಬೈಜಾಲ್ ಅವರನ್ನು ಗುರಿಯಾಗಿಸಿಕೊಂಡು ಯುಪಿಎ ಸರ್ಕಾರ ಕಿರುಕುಳ ನೀಡಿದೆ. ಅವರು ನಿವೃತ್ತಿ ನಂತರ ನನ್ನನ್ನು ಭೇಟಿ ಮಾಡಿದ್ದರು ಮತ್ತು ಅವರಿಗೆ ಕಿರುಕುಳ ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು ಎಂದು ಜೇಟ್ಲಿ ಹೇಳಿದ್ದಾರೆ.
ಬಹುಕೋಟಿ 2ಜಿ ಸ್ಪ್ರೆಕ್ಟ್ರಂ ಹಗರಣದ ಬಗ್ಗೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಗೊತ್ತಿತ್ತು. ಆದರೂ 2ಜಿ ಹಂಚಿಕೆಗೆ ಸಹಕರಿಸಿ, ಇಲ್ಲದಿದ್ದರೆ ಪರಿಸ್ಥಿತಿ ಸರಿ ಇರುವುದಿಲ್ಲ ಎಂದು ಡಾ.ಸಿಂಗ್ ಅಂದಿನ ಸಚಿವ ದಯಾನಿಧಿ ಮಾರನ್ ಮತ್ತು ಸಿಬಿಐನವರಿಗೆ ಬೆದರಿಸಿದ್ದರು. ಸಿಂಗ್ ಅವರು ಸಮ್ಮಿಶ್ರ ಸರ್ಕಾರದ ಮೈತ್ರಿ ಧರ್ಮಕ್ಕೆ ಕಟ್ಟುಬಿದ್ದಿದ್ದರು. ಮಾರನ್ ಹೇಳಿದ್ದನ್ನೆಲ್ಲ ಪಾಲಿಸುವಂತೆ ಸೂಚಿಸಿದ್ದರು ಎಂದು 2ಜಿ ಪ್ರಕರಣದಲ್ಲಿ ತನಿಖೆ ಎದುರಿಸಿದ್ದ ಪ್ರದೀಪ್ ಬೈಜಾಲ್ ಆರೊಪಿಸಿದ್ದರು.