ಬೆಂಗಳೂರು : ರಾಷ್ಟ್ರಾಧ್ಯಂತ ಏಕ ರೂಪದ ತೆರಿಗೆ ವ್ಯವಸ್ಥೆ ಇರಬೇಕೆಂಬ ಸದುದ್ದೇಶ ಹೊಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ವಿಧೇಯಕವು ಯುಪಿಎ ಸರ್ಕಾರದ ಕೂಸು ಎಂದು ಬಣ್ಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ವಿರೋಧಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ . ಸಾರ್ವಜನಿಕ ಹಿತದೃಷ್ಠಿಯಿಂದ ಈ ವಿಧೇಯಕದಲ್ಲಿದ್ದ ಕೆಲವು ನ್ಯೂನ್ಯತೆಗಳನ್ನು ಸರಿಪಡಿಸುವಂತೆ ತಮ್ಮ ಪಕ್ಷದ ನೇತಾರರು ಸಂಸತ್ತಿನಲ್ಲಿ ಸಲಹೆಗಳನ್ನಿತ್ತದ್ದು ನಿಜ ಎಂದರು.
ವಿಧೇಯಕದ ಪರಿಕಲ್ಪನೆ ಹಾಗೂ ರೂಪು-ರೇಷೆ ಯುಪಿಎ ಸರ್ಕಾರದ ಅವಧಿಯಲ್ಲೇ ನಡೆದಿದೆ ಎಂಬುದು ಗಮನಾರ್ಹ. ಈ ವಿಧೇಯಕವು ರಾಷ್ಟ್ರಾಧ್ಯಂತ ಜಾರಿಗೊಳ್ಳಬೇಕಾದರೆ, ಪ್ರತಿ ರಾಜ್ಯದಲ್ಲೂ ಅಲ್ಲಿನ ವಿಧಾನ ಮಂಡಲದಲ್ಲಿ ಅನುಮೋದನೆ ಪಡೆಯಬೇಕು. ಒಂದು ರಾಷ್ಟ್ರ ಹಾಗೂ ಒಂದು ತೆರಿಗೆ ವ್ಯವಸ್ಥೆಯ ಜಾರಿಯಿಂದ ಆರ್ಥಿಕ ಚಟುವಟಿಕೆಗಳಲ್ಲಿ ಪಾರದರ್ಶಕತೆ ವೃದ್ಧಿಸಲಿದೆ.
ಮುಂದಿನ ಸಾಲಿನ ಅಂದರೆ 2017 ನೇ ಸಾಲಿನ ಏಪ್ರಿಲ್ 1 ರಿಂದ ಜಾರಿಗೆ ಬರಲಿರುವ ಈ ವ್ಯವಸ್ಥೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಸರ್ವ ಸನ್ನದ್ಧವಾಗಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.