ಬೆಂಗಳೂರು : ಒಂದಂಕಿ ಲಾಟರಿ ದಂಧೆ ಕುರಿತು ಕೇಂದ್ರದ ಜಾರಿ ನಿರ್ದೇಶನಾಲಯದಿಂದ (ಇ.ಡಿ) ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಎಲ್ಲಾ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸಲು ಸಾಧ್ಯವಿಲ್ಲ. ಲಾಟರಿ ದಂಧೆ ಕುರಿತು ಸಿಐಡಿ ಪೊಲೀಸರೇ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಲಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಹಣಕಾಸಿನ ವಿಚಾರವೂ ಇರುವುದರಿಂದ ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯವನ್ನು ಕೋರಲಾಗುವುದು ಎಂದು ತಿಳಿಸಿದರು.
ಒಂದಂಕಿ ಲಾಟರಿ ಹಗರಣ ಕುರಿತಂತೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಹಗರಣದ ಕುರಿತು ತನಿಖೆ ನಡೆಸಲು ರಾಜ್ಯದ ಪೊಲೀಸರು ಶಕ್ತರಾಗಿದ್ದಾರೆ. ಮೇಲಾಗಿ ಎಲ್ಲಾ ಪ್ರಕರಣಗಳನ್ನೂ ಸಿಬಿಐಗೆ ವಹಿಸಿದರೆ ಅವರಿಂದ ತನಿಖೆ ನಡೆಸುವುದು ಕಷ್ಟವಾಗುತ್ತದೆ. ಈ ಮಧ್ಯೆ ಲಾಟರಿ ದಂಧೆ ಹೊರ ರಾಜ್ಯಗಳಿಗೂ ವ್ಯಾಪಿಸಿರುವ ಬಗ್ಗೆ ಆರೋಪ ಕೇಳಿಬರುತ್ತಿರುವುದರಿಂದ ಈ ಕುರಿತು ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯಕ್ಕೆ ಮನವಿ ಮಾಡುವುದಾಗಿ ಹೇಳಿದರು.
ಲಾಟರಿ ಹಗರಣ ಕುರಿತಂತೆ ಸಿಐಡಿ ಸಲ್ಲಿಸಿದ್ದ ಮಧ್ಯಂತರ ವರದಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಹೆಸರು ಮಾತ್ರ ಇತ್ತು. ದಂಧೆಯ ರೂವಾರಿ ಪಾರಿರಾಜನ್ ಜತೆ ಅಲೋಕ್ ಕುಮಾರ್ ಸಂಪರ್ಕ ಹೊಂದಿದ್ದರು ಮತ್ತು ಆತನನ್ನು ಬಂಧಿಸಲು ಹೋಗಿದ್ದ ಸಬ್ ಇನ್ಸ್ಪೆಕ್ಟರ್ ಗೆ ಎರಡು ಬಾರಿ ದೂರವಾಣಿ ಕರೆ ಮಾಡಿದ್ದರು. ಹೀಗಾಗಿ ಮೇಲ್ನೋಟಕ್ಕೆ ಅವರು ಶಾಮೀಲಾಗಿರುವ ಸಾಧ್ಯತೆ ಕಂಡುಬರುತ್ತಿದೆ. ಹೀಗಾಗಿ ಅವರನ್ನು ವಿಚಾರಣೆಗೊಳಪಡಿಸಲು ಅವಕಾಶ ನೀಡಬೇಕು ಎಂದು ಸಿಐಡಿ ವರದಿಯಲ್ಲಿ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಅಲೋಕ್ ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಮಧ್ಯಂತರ ವರದಿಯಲ್ಲಿ ಬೇರೆ ಅಧಿಕಾರಿಗಳ ಹೆಸರು ಇರಲಿಲ್ಲ. ಹಗರಣದ ಕುರಿತು ಸಿಐಡಿ ನೀಡುವ ಅಂತಿಮ ವರದಿಯಲ್ಲಿ ಬೇರೆ ಅಧಿಕಾರಿಗಳ ಹೆಸರು ಇದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಇದನ್ನು ಮುಖ್ಯಮಂತ್ರಿಗಳೂ ಈಗಾಗಲೇ ಹೇಳಿದ್ದಾರೆ. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಅಬಕಾರಿ ಮತ್ತು ಲಾಟರಿ ವಿಚಕ್ಷಣ ದಳದ ಎಸ್ಪಿ ಧರಣೇಶ್ ಅಮಾನತಿಗೆ ಸಂಬಂಧಿಸಿದಂತೆ ಖಾಸಗಿವಾಹಿನಿಯಲ್ಲಿ ಅವರು ಪಾರಿರಾಜನ್ ಜತೆ ಮಾತನಾಡಿದ್ದು ವರದಿಯಾಗಿದ್ದರಿಂದ ಮೇಲಧಿಕಾರಿಯೂ ಆಗಿರುವ ಐಜಿಪಿ ಪದ್ಮನಯನ ಶಿಫಾರಸಿನಂತೆ ಕ್ರಮ ಕೈಗೊಳ್ಳಲಾಗಿದೆ. ಲಾಟರಿ ಹಗರಣದ ತನಿಖೆಯಲ್ಲಿ ಯಾವೆಲ್ಲಾ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ವರದಿ ಬರುತ್ತದೋ ಅವರೆಲ್ಲರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದರು.