ಬೆಂಗಳೂರು : ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ನಕಲಿ ಸಿಡಿ ಪ್ರಕರಣ ಮೊಕದ್ದಮೆಯನ್ನು ಹಿಂಪಡೆದ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಲ್ಲಿ, ಈ ಪ್ರಕರಣವನ್ನು ಸರ್ಕಾರ ಹಿಂಪಡೆಯಬಾರದೆಂದು ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ನಾಯ್ಕ್ ಅವರು ಪತ್ರ ಬರೆದಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.
ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನಿರ್ದೇಶಕರಿಗೆ ಅಶೋಕ್ ನಾಯ್ಕ್ ಅವರು ಈ ಬಗ್ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾತನಾಡಿದ ಅಶೋಕ್ ನಾಯ್ಕ್ ಅವರು, 'ಯಾವುದೇ ತೀವ್ರ ಸ್ವರೂಪದ ಮೊಕದ್ದಮೆಯನ್ನು ಹಿಂಪಡೆಯಬೇಕಾದರೆ ಸರ್ಕಾರಿ ಅಭಿಯೋಜಕರು ಮೊದಲು ಕಾಲಂ 321ರ ಅಡಿಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅದಕ್ಕೂ ಮೊದಲು ಸರ್ಕಾರ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಿ, ಸಮಾಜದ ಹಿತದೃಷ್ಟಿಯಿಂದ ಸರಿಯಾದ ಕಾರಣ ನೀಡಿ ಸಂಬಂಧಪಟ್ಟ ಅಭಿಯೋಜಕರಿಗೆ ಪ್ರಕರಣ ಹಿಂಪಡೆಯಲು ಆದೇಶಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ಸರ್ಕಾರ ಇದೇ ರೀತಿ ಆದೇಶ ಮಾಡಿದೆ, ಆದರೆ ಆದೇಶದಲ್ಲಿ ಕಾರಣ ಕೊಟ್ಟಿಲ್ಲ. ಇದು ಕುಮಟಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಪ್ರಕರಣ. ಈ ಸಂಬಂಧ ಸರ್ಕಾರಿ ಅಭಿಯೋಜಕನಾಗಿರುವ ನನಗೆ ಸರ್ಕಾರದಿಂದ ಆದೇಶ ಬಂದಿದೆ. ಈ ಆದೇಶದಲ್ಲಿ ಪ್ರಕರಣವನ್ನು ಸರ್ಕಾರ ಸಮಗ್ರವಾಗಿ ಪರಿಶೀಲಿಸಿದೆ ಮತ್ತು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಕೂಡಲೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ನ್ಯಾಯಾಲಯಕ್ಕೆ ಮನವರಿಕೆ ಮಾಡಿ ಈ ಪ್ರಕರಣವನ್ನು ಹಿಂಪಡೆಯಬೇಕು ಮತ್ತು ನ್ಯಾಯಾಲಯದ ಆದೇಶವನ್ನು ಸರ್ಕಾರಕ್ಕೆ ಸಲ್ಲಿಸಿಬೇಕು ಎಂದು ಆದೇಶ ಮಾಡಿದೆ' ಎಂದು ಹೇಳಿದ್ದಾರೆ.
ಯಾವುದೇ ಕಾರಣವಿಲ್ಲದೆ ಒಬ್ಬರು ಯತಿಗಳ ಮಾನಹಾನಿಗೆ ಪ್ರಯತ್ನಿಸಿದ ಈ( ನಕಲಿ ಸಿಡಿ ಮೊಕದ್ದಮೆಯನ್ನು ಏಕಾಏಕಿ ಹಿಂಪಡೆಯುವ ಸರ್ಕಾರದ ನಿರ್ಧಾರಕ್ಕೆ ಮಠದ ಭಕ್ತರಿಂದ ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಶೋಕ್ ನಾಯ್ಕ್ ಅವರ ಈ ಪತ್ರದಿಂದ ಪ್ರಕರಣ ಯಾವು ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ.
ಪ್ರಕರಣದ ಹಿನ್ನಲೆ
ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರನ್ನು ಹೋಲುವ ವ್ಯಕ್ತಿಯೊಬ್ಬನನ್ನು ಬಳಸಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಬಗ್ಗೆ ತಯಾರಿಸಿದ್ದ ಅಶ್ಲೀಲ ಚಿತ್ರದ ನಕಲಿ ಸಿ.ಡಿ. ಮತ್ತು ಅವಹೇಳನಕಾರಿ ಬರಹವಿರುವ ಲೇಖನ ಹಂಚುತ್ತಿದ್ದ ಬಗ್ಗೆ ಗೋಕರ್ಣದ ವೆಂಕಟರಮಣ ದೇವಸ್ಥಾನದ ಆಡಳಿತ ಕಾರ್ಯದರ್ಶಿ ಗಣಪತಿ ಕೃಷ್ಣ ಹೆಗಡೆ ಎಂಬವರು ಗೋಕರ್ಣ ಪೊಲೀಸ್ ಠಾಣೆಯಲ್ಲಿ 2010ರ ಎ.1ರಂದು ದೂರು ದಾಖಲಿಸಿದ್ದರು. ಅದರಂತೆ ಗೋಪಾಲ್ ಬಿ. ಹೊಸೂರ್ ಅವರ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಸಾಕ್ಷಿ, ಪುವಾಎ ಸಹಿತ ಬಂಧಿಸಿ 14 ಮಂದಿ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಸ್ತುತ ಕುಮಟಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಅಂತಿಮ ಹಂತದಲ್ಲಿತ್ತು.
ಈ ಮಧ್ಯೆ 2015ರಲ್ಲಿ ಶ್ರೀಕ್ಷೇತ್ರ ಗೋಕರ್ಣ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಈ ಹಿಂದೆ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರಿಗೆ ಮನವಿ ಸಲ್ಲಿಸಿ, ಗೋಕರ್ಣ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣ ಹಿಂಪಡೆಯುವಂತೆ ಕೋರಿದ್ದರು. ಅದರಂತೆ ಜಾರ್ಜ್ 2015ರ ಎ. 10ರಂದು ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾವಿಸಿದ್ದರು. ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ ನಿರ್ದೇಶಕರ ಅಭಿಪ್ರಾಯ ಕೇಳಿದಾಗ, ಇದು ಹಿಂಪಡೆಯಲು ಅರ್ಹವಲ್ಲದ ಪ್ರಕರಣ ಮತ್ತು ಪ್ರಕರಣ ಹಿಂಪಡೆಯಬಾರದು ಎಂದು ಹೇಳಿದ್ದರೂ ಸಹ ಪ್ರಕರಣ ಹಿಂಪಡೆಯಲಾಗಿತ್ತು.