ಬೆಂಗಳೂರು : ವಿದ್ಯಾರ್ಥಿಗಳಿಗೆ ವರುಷ, ಪಿಯು ಬೋರ್ಡ್ ಗೆ ನಿಮಿಷ.. ವಿದ್ಯಾರ್ಥಿಗಳು ವರ್ಷವಿಡೀ ನಡೆಸಿದ ಪ್ರಯತ್ನಗಳಿಗೆ ಪಿಯು ಮಂಡಳಿ ನೀರೆರೆದಿದ್ದು, ಅವರ ಭವಿಷ್ಯಗಳ ಮೇಲೆಯೇ ಆಟವಾಡುತ್ತಿದೆ.
ದ್ವಿತೀಯ ಪಿಯು ಮೌಲ್ಯಮಾಪನದಲ್ಲಿ ಉಂಟಾಗಿರುವ ತಪ್ಪುಗಳ ವಿರುದ್ಧ ಕಳೆದ ಕೆಲವು ದಿನಗಳಿಂದ ಹೋರಾಡುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಇನ್ನಷ್ಟು ತೀವ್ರತೆ ಪಡೆದಿದೆ.
ತಮ್ಮ ಭವಿಷ್ಯವನ್ನೇ ಕಿತ್ತುಕೊಂಡಿರುವ ಶಿಕ್ಷಣೆ ಇಲಾಖೆ / ಪಿಯು ಬೋರ್ಡ್ ನ ಬೇಜವಾಬ್ದಾರಿಯುತ ನಡೆಗೆ ಆಕ್ರೋಶಗೊಂಡಿರುವ ವಿದ್ಯಾರ್ಥಿಗಳು ಹಾಗೂ ಪಾಲಕರು ಶುಕ್ರವಾರ ತಮ್ಮ ಪ್ರತಿಭಟನೆಯನ್ನು ಉಗ್ರಗೊಳಿಸಿದ್ದಾರೆ.
ಈ ನಡುವೆ ಮಾಮೂಲಿನಂತೆ ವಿವಾದ ರಾಜಕೀಯ ತಿರುವು ಪಡೆಯುತ್ತಿದ್ದು, ನೇತಾಗಳು ಈ ವಿವಾದದ ಉರಿಯಲ್ಲೇ ತಮ್ಮ ರಾಜಕೀಯ ಬೇಳೆ ಬೇಯಿಸಿಕೊೞುವ ಎಲ್ಲ ಲಕ್ಷಣಗಳೂ ಸ್ಪಷ್ಟವಾಗುತ್ತಿದೆ. ಬಿಜೆಪಿ, ಜೆಡಿಎಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದು, ಅಮಾಯಕ ವಿದ್ಯಾರ್ಥಿಗಳ ಹೋರಾಟಕ್ಕೆ ಬಲ ಬಂದಂತಾಗಿದೆ.
ಮಲ್ಲೇಶ್ವರಂ ನಲ್ಲಿರುವ ಪಿಯು ಮಂಡಳಿಯ ಎದುರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಶುಕ್ರವಾರ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ಮುಖಂಡ, ಮಾಜಿ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ, ವಿದ್ಯಾರ್ಥಿಗಳ ಅಹವಾಲು ಆಲಿಸಿ, ಈ ಗೊಂದಲದ ಬಗ್ಗೆ ಪಿಯು ಮಂಡಳಿ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ತಿಳಿಸಿದರು. ಪಿಯು ಫಲಿತಾಂಶದ ಗೊಂದಲ ಕುರಿತಂತೆ ರಾಜ್ಯ ಸರ್ಕಾರದ ವಿರುದ್ಧ ಇಬ್ಬರೂ ನಾಯಕರು ವಾಗ್ದಾಳಿ ನಡೆಸಿದರು.
ವಿವಾದ ರಾಜಕೀಯ ತಿರುವು ಪಡೆದುಕೊಂಡ ಹಾಗೂ ಪ್ರತಿಭಟನೆಯ ತೀವ್ರತೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹಲವು ದಿನಗಳಿಂದ ನಿದ್ದೆಯಲ್ಲಿದ್ದ ಸರಕಾರ ಎಚ್ಚೆತ್ತುಕೊಂಡಿರುವಂತೆ ಭಾಸವಾಗುತ್ತಿದೆ. ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಪಿಯು ಶಿಕ್ಷಣ ಮಂಡಳಿಯ ಅಧಿಕಾರಿಗಳ ವಿರುದ್ಧ ಹರಿಹಾಯ್ದು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿಭಟನೆ ತೀವ್ರವಾಗತೊಡಗಿದಂತೆ ಈವರೆಗೆ ತೆರೆಮರೆಯಲ್ಲಿ ಅಡಗಿದ್ದ ಅಧಿಕಾರಿಗಳು ಹಾಗೂ ತಮ್ಮ ಇತರೇ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದ ಸಚಿವರೂ ಇದ್ದಕ್ಕಿದ್ದ ಹಾಗೆ ಎಚ್ಚೆತ್ತುಕೊಂಡಿದ್ದು, ಸಚಿವ ಕಿಮ್ಮನೆ ಶುಕ್ರವಾರ ವಿಧಾನಸೌಧದಲ್ಲಿ ಪಿಯು ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಭೆಗೂ ಮುನ್ನ ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ಕಿಮ್ಮನೆ ರತ್ನಾಕರ್, ಮೊದಲು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ, ನಂತರ ಈ ಸಮಸ್ಯೆಗೆ ಪರಿಹಾರವೇನು ಅಂಬುದನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸುತ್ತೇನೆ ಎಂದು ಹೇಳಿದರು.
ಸಭೆಯಲ್ಲಿ ಸಚಿವ ಕಿಮ್ಮನೆ, ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಮೌಲ್ಯಮಾಪನ ವಿಚಾರದಲ್ಲಿ ಎಚ್ಚರ ವಹಿಸಬೇಕು. ಇದನ್ನು ನಿಮಗೆ ಹೊಸದಾಗಿ ಹೇಳಿಕೊಡಬೇಕಾ? ಅಷ್ಟೇ ಅಲ್ಲ, ಸೂಕ್ತ ಮಾಹಿತಿ ನೀಡುವಲ್ಲಿಯೂ ನೀವು ವಿಫಲರಾಗಿದ್ದೀರಿ. ಪೋಷಕರಿಗೆ ಗೊಂದಲದ ಬಗ್ಗೆ ವಿವರಿಸಿ ಮನದಟ್ಟು ಮಾಡುವಲ್ಲಿಯೂ ವಿಫಲರಾಗಿದ್ದೀರಿ. ಇದನ್ನು ಸಹಿಸಿಕೊಳ್ಳೋದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಗೊಂದಲದಿಂದಾಗಿಯೇ ಸಿಇಟಿ ಫಲಿತಾಂಶ ಮುಂದೂಡಲು ಕಾರಣವಾಗಿದೆ. ( ಮೇ 26ಕ್ಕೆ ಪ್ರಕಟವಾಗಬೇಕಿದ್ದ ಸಿಇಟಿ ಫಲಿತಾಂಶವನ್ನು ಜೂನ್ 8ಕ್ಕೆ ಪ್ರಕಟಿಸುವುದಾಗಿ ಕಾಮೆಡ್ ಕೆ ಹೇಳಿದೆ) ಮಾಧ್ಯಮಗಳಿಗೆ, ವಿದ್ಯಾರ್ಥಿಗಳಿಗೆ ನೀವು ಮಾಹಿತಿ ನೀಡಬೇಕಾಗಿತ್ತು ಎಂದು ಕಿಮ್ಮನೆ ಅಧಿಕಾರಿಗಳಿಗೆ ಹೇಳಿದರು.
ಸಚಿವರ ತರಾಟೆಯಿಂದ ಮೆತ್ತಗಾದ ಪಿಯು ಮಂಡಳಿ ಅಧಿಕಾರಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಸಮಾಧಾನಪಡಿಸುವುದಾಗಿ ಸಚಿವರಿಗೆ ಭರವಸೆ ನೀಡಿದರು. ಪಿಯು ಫಲಿತಾಂಶದಲ್ಲಿನ ಗೊಂದಲದಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಮಲ್ಲೇಶ್ವರಂನಲ್ಲಿರುವ ಪಿಯು ಮಂಡಳಿ ಎದುರು ವಿದ್ಯಾರ್ಥಿಗಳು, ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.