ನವದೆಹಲಿ : ದೆಹಲಿಗೆ ಹಂಗಾಮಿ ಮುಖ್ಯ ಕಾರ್ಯದರ್ಶಿ ನೇಮಕ ಸಂಬಂಧ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಡುವಿನ ಜಟಾಪಟಿ ಮತ್ತಷ್ಟು ತೀವ್ರಗೊಂಡಿದೆ. ಉಭಯ ನಾಯಕರು ಬಹಿರಂಗವಾಗಿಯೇ ಬಲಾಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ದೆಹಲಿಯ ಹಂಗಾಮಿ ಮುಖ್ಯಕಾರ್ಯದರ್ಶಿಯಾಗಿ ಶಕುಂತಲಾ ಗಾಮ್ಲಿನ್ ಅವರನ್ನು ರಾಜ್ಯಪಾಲರು ನೇಮಿಸಿದ್ದು ಕೇಜ್ರಿವಾಲ್ ಅವರ ಕಣ್ಣು ಕೆಂಪಗಾಗುವಂತೆ ಮಾಡಿದೆ. ಹೀಗಾಗಿ ಅಧಿಕಾರ ಸ್ವೀಕರಿಸದಂತೆ ಶಕುಂತಲಾ ಅವರಿಗೆ ಆಪ್ ಸರ್ಕಾರ ಸೂಚಿಸಿತ್ತು. ಆದರೆ ಈ ಸೂಚನೆಯನ್ನು ಧಿಕ್ಕರಿಸಿ ಶಕುಂತಲಾ ಗಾಮ್ಲಿನ್ ಅವರು ಶನಿವಾರ ದೆಹಲಿಯ ಹಂಗಾಮಿ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಗಾಮ್ಲಿನ್ ಅವರ ಈ ನಡೆಯ ಹಿಂದೆ ನಜೀಬ್ ಜಂಗ್ ಅವರ ಕೈವಾಡವಿದೆ ಎಂದು ಆಕ್ರೋಶಗೊಂಡಿರುವ ಆಪ್ ಸರ್ಕಾರ, ಇತಿಮಿತಿಯೊಳಗೆ ಕೆಲಸ ಮಾಡಿ ಎಂದು ಲೆಫ್ಟಿನೆಂಟ್ ಗವರ್ನರ್ ಗೆ ಪತ್ರ ಬರೆದಿದೆ. ಜೊತೆಗೆ ಗಾಮ್ಲಿನ್ ಅವರ ನೇಮಕದ ಆದೇಶ ಹೊರಡಿಸಿದ್ದ ದೆಹಲಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಿ ತನ್ನ ಆಕ್ರೋಶ ತೀರಿಸಿಕೊಂಡಿದೆ. ಜೊತೆಗೆ ಜಂಗ್ ವಿರುದ್ಧ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ದೂರು ಸಲ್ಲಿಸಲೂ ಆಪ್ ನಾಯಕರು ನಿರ್ಧರಿಸಿದ್ದಾರೆ.