ನವದೆಹಲಿ : ಯೋಗಗುರು ಬಾಬಾ ರಾಮ್ ದೇವ್ ಅವರ ದಿವ್ಯ ಫಾರ್ಮಸಿ ಬಿಡುಗಡೆ ಮಾಡಿರುವ ಪುತ್ರಜೀವಕ್ ಬೀಜ್ ಮಾತ್ರೆಯ ವಿಚಾರ ರಾಜ್ಯಸಭೆಯಲ್ಲಿ ತೀವ್ರ ವಿರೋಧಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ರಾಮ್ ದೇವ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ವಿಷಯ ಪ್ರಸ್ತಾಪಿಸಿದ ಜೆಡಿಯು ಸಂಸದ ಕೆ.ಸಿ.ತ್ಯಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಮ್ ದೇವ್, ಪುತ್ರಜೀವಕ್ ಬೀಜ್ ಎಂದರೆ ಗಂಡು ಮಗುವಿಗೆ ಜನ್ಮ ನೀಡೋದು ಎಂದರ್ಥವಲ್ಲ. ಈ ಔಷಧ ಮಕ್ಕಳಾಗದ ಸಮಸ್ಯೆ ನಿವಾರಿಸುತ್ತದೆ. ಆದರೆ ಈ ಬಗ್ಗೆ ಅನಗತ್ಯವಾಗಿ ರಾಜಕೀಯ ಮಾಡಲಾಗುತ್ತಿದೆ. ನನ್ನ ಹೆಸರು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಗೆ ಮಸಿ ಬಳಿಯುವ ಯತ್ನ ಇದಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸಂಸತ್ ಇರುವುದು ಪ್ರಮುಖ ವಿಷಯಗಳ ಚರ್ಚೆಗಾಗಿ. ಆದರೆ ಮೇಲ್ಮನೆಯಲ್ಲಿ ನೇಪಾಳದ ಭೂಕಂಪದ ಬಗ್ಗೆ, ರೈತರ ಸಮಸ್ಯೆ ಬಗ್ಗೆ ಚರ್ಚಿಸಿಲ್ಲ. ಮಕ್ಕಳನ್ನು ಪಡೆಯಲು ಈ ಔಷಧ ಸಹಕಾರಿಯಾಗಿದೆ. ನಾನು ಯಾವಾಗಲೂ ಮಹಿಳೆಯರನ್ನು ಗೌರವಿಸುತ್ತೇನೆ. ಹಾಗಾಗಿ ನಾನು ಔಷಧದ ಹೆಸರು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ನನ್ನ ಮೂಲಕ ಮೋದಿ ಹೆಸರು ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ತ್ಯಾಗಿ ವಿರುದ್ಧ ಕಿಡಿಕಾರಿದ ಬಾಬಾ ರಾಮ್ ದೇವ್. ನಾವು ಗಂಡು ಮಗುವೇ ಆಗುತ್ತೆ ಎಂದು ಗ್ಯಾರಂಟಿ ನೀಡಿಲ್ಲ. ಆದರೆ ಔಷಧ ಮಕ್ಕಳಾಗದ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ. ಔಷಧದ ವಿಚಾರದಲ್ಲಿ ವಿನಾಕಾರಣ ವಿವಾದ ಸೃಷ್ಟಿಸಿದ್ದಾರೆ ಎಂದು ಹೇಳಿದ್ದಾರೆ.