ಬೆಂಗಳೂರು : ಕಳಸಾ-ಬಂಡೂರಿ, ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಸೆ. 26ರಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ. 30ಕ್ಕೂ ಹೆಚ್ಚು ಸಂಘಟನೆಗಳು ಮಹದಾಯಿ ಹೋರಾಟಕ್ಕೆ ಕೈಜೋಡಿಸುವ ಭರವಸೆ ಕೊಟ್ಟಿರುವುದರಿಂದ ಬಂದ್ ಜನಜೀವನ ಅಸ್ತವ್ಯಸ್ತಗೊಳಿಸುವ ಸುಳಿವು ನೀಡಿದೆ.
ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಮತ್ತು ಆಟೋ ಸೇವೆ ಸ್ಥಗಿತಗೊಳ್ಳುವುದು ಬಹುತೇಕ ಖಚಿತವಾಗಿದೆ.
ಬಂದ್ ಗೆ ಕನ್ನಡ ಚಲನಚಿತ್ರ ಕಲಾವಿದರು, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ, ಕನ್ನಡ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಜಾಗೃತಿ ಸೇನೆ, ಕನ್ನಡ ಪರ ಹೋರಾಟಗಾರರ ಸಂಘ, ರೈತ ಸಂಘಟನೆಗಳು, ವಕೀಲರ ಸಂಘ, ಕರ್ನಾಟಕ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬಿಎಂಟಿಸಿ ಉತ್ತರ ಕರ್ನಾಟಕ ನೌಕರರ ಕ್ಷೇಮಾಭಿವೃದ್ಧಿ ಸಂಘ, ಕೆಎಸ್ಆರ್ಟಿಸಿ ಕೇಂದ್ರ ಕನ್ನಡ ಕ್ರಿಯಾ ಸಮಿತಿ, ಗೂಡ್ಸ್ ಟ್ರಕ್ ಓನರ್ಸ್ ಅಸೋಸಿಯೇಷನ್, ರಾಜ್ಯ ಲೈಟ್, ಮೀಡಿಯಂ ಗೂಡ್ಸ್ ಟ್ರಕ್ ಓನರ್ಸ್ ಅಸೋಸಿಯೇಷನ್, ಆಟೋ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ, ವಿಮಾ ಸಂಸ್ಥೆಗಳು, ಅಂಗನವಾಡಿ, ಬಿಸಿಯೂಟ ನೌಕರರು ಮತ್ತು ಬೀಡಿ ಕಾರ್ವಿುಕರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಕುರಿತು ಶುಕ್ರವಾರ ನಿರ್ಧಾರ ತೆಗೆದುಕೊಂಡು, ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯೋಪಾಧ್ಯಾಯರ ಮೂಲಕ ಮಕ್ಕಳಿಗೆ ಮಾಹಿತಿ ನೀಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕೆ.ಎಸ್. ಸತ್ಯಮೂರ್ತಿ ತಿಳಿಸಿದ್ದಾರೆ.