ನವದೆಹಲಿ : ಸಾರ್ವಜನಿಕ ಆಡಳಿತದಲ್ಲಿ ಉತ್ತಮ ಕಾರ್ಯಕ್ಷಮತೆ ಪ್ರದರ್ಶಿಸಿರುವ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನಾಗರಿಕ ಸೇವಾ ದಿನ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.
ಏ.21ರಂದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಾಗರಿಕ ಸೇವಾ ಅಧಿಕಾರಿಗಳಿಗೆ ಉತ್ತಮ ಆಡಳಿತದ ನಡೆಸುವುದರ ಬಗ್ಗೆ ಕೆಲವೊಂದು ಅಂಶಗಳನ್ನು ತಿಳಿಸಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ, ಬೆಸ್ಟ್ ಪ್ರಾಕ್ಟಿಸಸ್-ಟುಮಾರೋ ಈಸ್ ಹಿಯರ್ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.
ಒತ್ತಡದ ಜೀವನದಿಂದ ಎಂದಿಗೂ ಫಲಪ್ರದ ಫಲಿತಾಂಶವನ್ನು ನೀಡಲು ಸಾಧ್ಯವಾಗುವುದಿಲ್ಲ, ಪ್ರಮುಖವಾಗಿ ದೇಶವನ್ನು ಮುನ್ನಡೆಸುವ ವಿಷಯದಲ್ಲಿ ಈ ಅಂಶ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಒತ್ತಡ ಎದುರಿಸುವುದರಿಂದ ಅಧಿಕಾರಿಗಳು ಮಾನಸಿಕವಾಗಿ ಕುಗ್ಗಿದರೆ, ದೇಶ ಮಿಂಚಲು ಹೇಗೆ ಸಾಧ್ಯ ಎಂದು ಮೋದಿ ಪ್ರಶ್ನಿಸಿದ್ದಾರೆ.
ಮನೆಯಲ್ಲಿದ್ದರೂ ಕುಟುಂಬ ಸದಸ್ಯರೊಂದಿಗಿರಲು ಸಾಧ್ಯವಾಗದೇ ಕಡತಗಳ ಬಗ್ಗೆಯೇ ಯೋಚನೆ ಮಾಡುತ್ತಿದ್ದರೆ ಜೀವನ ಯಾಂತ್ರಿಕವಾಗುತ್ತದೆ. ಈ ಪ್ರವೃತ್ತಿ ದೇಶದ ಆಡಳಿತದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಈ ಹಿನ್ನೆಲೆಯಲ್ಲಿ ಕುಟುಂಬ ಹಾಗೂ ಕೆಲಸಗಳಿಗೆ ಸಮಯವನ್ನು ಸಮನ್ವಯ ಮಾಡಬೇಕು ಎಂದು ಮೋದಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದಾರೆ. ನಮ್ಮೊಂದಿಗಿನ ಮಾನವೀಯತೆ ಜೀವಂತವಾಗಿಲ್ಲದೇ ಇದ್ದರೆ, ದೇಶದ ಜನತೆಯ ಸೇವೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಮ್ಮೊಳಗೇ ಇರುವ ಮಾನವಿಯತೆಯನ್ನು ಜೀವಂತವಾಗಿರಿಸಿಕೊಳ್ಳಬೇಕೆಂದು ಮೋದಿ ಕರೆ ನೀಡಿದ್ದಾರೆ.
ಪ್ರಸ್ತುತ ನಮ್ಮ ಸಮಾಜಕ್ಕೆ ಸಾಮಾಜಿಕ-ಆರ್ಥಿಕ ಏಕೀಕರಣದ ಅಗತ್ಯವಿದೆ. ಹೊಣೆಗಾರಿಕೆ, ಜವಾಬ್ದಾರಿ ಮತ್ತು ಪಾರದರ್ಶಕತೆ ಈ ಮೂರು ಅಂಶಗಳು ಉತ್ತಮ ಆಡಳಿತದ ಸೂತ್ರಗಳು ಎಂದು ಮೋದಿ ಅಧಿಕಾರಿಗಳಿಗೆ ಉತ್ತಮ ಆಡಳಿತದ ಸೂತ್ರವನ್ನು ತಿಳಿಸಿದ್ದಾರೆ.