ನವದೆಹಲಿ : ಭೂಸ್ವಾಧೀನ ಕಾಯ್ದೆ ವಿರೋಧಿಸಿ ಮೋದಿ ವಿರುದ್ಧ ತೀವ್ರ ವಾಗ್ಧಾಳಿ ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ನಮ್ಮ ಸರ್ಕಾರ ಯಾವಾಗಲೂ ಬಡವರಿಗಾಗಿ ಕೆಲಸ ಮಾಡಲಿದೆ. ಭೂ ಮಸೂದೆ ಕಾಯ್ದೆ ತಿದ್ದುಪಡಿ ಕುರಿತಂತೆ ತಪ್ಪು ಮಾಹಿತಿಯನ್ನು ರವಾನಿಸಬೇಡಿ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ನಾನು ಈ ವರೆಗೂ ಯಾವುದೇ ನಿರ್ಧಾರ ಕೈಗೊಂಡಿದ್ದರೂ ಅದು ಬಡಜನರ ಅಭಿವೃದ್ಧಿ, ಶಿಕ್ಷಣ, ಸಹಾಯಕ್ಕಾಗಿ. ಅವರಿಗೆ ಸಹಾಯವಾಗುವ ಯೋಜನೆಗಳನ್ನು ಜಾರಿಗೆ ತರಲು ಚಿಂತಿನೆ ನಡೆಸುತ್ತಿದ್ದೇವೆ ಎಂದರು.
ಸರ್ಕಾರ ಎಂದಿಗೂ ರೈತರ ಪರವಾಗಿಯೇ ಇದೆ. ಅಕಾಲಿಕ ಮಳೆಯಿಂದಾಗಿ ಅಪಾರ ನಷ್ಟ ಹೊಂದಿದ ರೈತರಿಗೆ ಪರಿಹಾರ ನೀಡಿದೆವು. ಸರ್ಕಾರವನ್ನು ದೂಷಿಸುವುದು, ಸರ್ಕಾರದ ನಿಲುವುಗಳನ್ನು ತಪ್ಪಾಗಿ ಹೇಳುವುದು ಕೆಲವರಿಗೆ ಹುಟ್ಟಿನಿಂದ ಬರುತ್ತದೆ. ಬಿಜೆಪಿಯನ್ನು ತುಳಿಯಬೇಕೆನ್ನುವುದು ಕೆಲವರಿಗೆ ಹವ್ಯಾಸವಾಗಿಬಿಟ್ಟಿದೆ. ವಿಮರ್ಶೆ ಮಾಡುವ ಹಕ್ಕು ಅವರಿಗೆ ಇದೆ. ಆದರೆ, ವಿಮರ್ಶೆ ಮಾಡುವ ಜನರು ತಾವು ತಟಸ್ಥರೀತಿಯಲ್ಲಿದ್ದೇವೆ ಎಂದು ಹೇಳುವ ಹಕ್ಕು ಅವರಿಗಿಲ್ಲ ಎಂದು ಕಿಡಿಕಾರಿದರು.