ನವದೆಹಲಿ : ರಾಜಸ್ಥಾನದ ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಪ್ರಕರಣ ಆಮ್ ಆದ್ಮಿ ಪಕ್ಷಕ್ಕೆ ಮಾರಕವಾಗಿ ಪರಿಣಮಿಸುವ ಸಾಧ್ಯತೆ ದಟ್ಟವಾಗಿದೆ.
ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಆಮ್ ಆದ್ಮಿ ಪಕ್ಷದ ವಿರುದ್ಧವೇ ಗಂಭೀರ ಆರೋಪ ಕೇಳಿಬಂದಿದೆ. ಮರ ಹತ್ತಿ ನೇಣು ಬಿಗಿದುಕೊಳ್ಳುವಂತೆ ರೈತ ಗಜೇಂದ್ರ ಸಿಂಗ್ ಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರೇ ಪ್ರಚೋದಿಸಿದ್ದರು ಎಂದು ದೆಹಲಿ ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ.
ಇಂತಹ ಅವಘಡಗಳನ್ನು ತಡೆಗಟ್ಟಲೆಂದೇ ತಮ್ಮ ಪ್ರತಿಭಟನಾ ರ್ಯಾಲಿಯನ್ನು ರಾಮ್ ಲೀಲಾ ಮೈದಾನಕ್ಕೆ ಸ್ಥಳಾಂತರಿಸಿ ಎಂದು ಮನವಿ ಮಾಡಿದ್ದರೂ ಆಮ್ ಆದ್ಮಿ ಪಕ್ಷದ ನಾಯಕರು ತಮ್ಮ ಸಲಹೆಯನ್ನು ತಿರಸ್ಕರಿಸಿದ್ದರು ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ಕೇಂದ್ರ ಗೃಹ ಇಲಾಖೆಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ.
ರೈತ ಗಜೇಂದ್ರ ಸಿಂಗ್ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸದಂತೆ ಆಮ್ ಆದ್ಮಿ ಪಕ್ಷ ನಿಯೋಜಿಸಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್ ದೆಹಲಿ ಪೊಲೀಸರಿಗೆ ಸೂಚನೆ ನೀಡಿದ್ದರು ಎಂಬ ಅಂಶವೂ ಬಯಲಾಗಿದೆ.
ಗಜೇಂದ್ರ ಸಿಂಗ್ ಮೊಬೈಲ್ ಕರೆಗಳ ವಿವರ ಪಡೆದು, ಸಾವಿಗೂ ಕೆಲವೇ ಕ್ಷಣಗಳ ಮುನ್ನ ಯಾರಿಗೆ ಕರೆ ಮಾಡಿದ್ದಾನೆ ಎಂಬ ಮಾಹಿತಿ ಪಡೆದಿರುವ ಪೊಲೀಸರು ಆತನ ಸಂಬಂಧಿಗಳನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ನೇಣು ಬಿಗಿದುಕೊಳ್ಳುವುದಕ್ಕೂ ಮುನ್ನ ಸಂಬಂಧಿಕರಿಗೆ ಕರೆ ಮಾಡಿದ್ದ ಗಜೇಂದ್ರ ಸಿಂಗ್, ಕೆಲವೇ ಕ್ಷಣದಲ್ಲಿ ದೊಡ್ಡ ಸುದ್ದಿ ಬರಲಿದೆ, ಟಿ.ವಿ ಆನ್ ಮಾಡಿ ಕಾಯುತ್ತಿರಿ ಎಂದು ಹೇಳಿದ್ದಾನೆ ಎಂದು ವಿಚಾರಣೆ ವೇಳೆ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಮೇಲೆ ಅನುಮಾನ ದಟ್ಟವಾಗುತ್ತಿದ್ದು, ದೆಹಲಿಯಲ್ಲಿ ಭೂಸ್ವಾಧೀನ ಕಾಯ್ದೆಯನ್ನು ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಮಾಧ್ಯಮಗಳ ಗಮನವನ್ನು ಸೆಳೆಯಲು, ಮರಹತ್ತಿ ನೇಣು ಬಿಗಿದುಕೊಳ್ಳುವಂತೆ ಆಪ್ ನಾಯಕರೇ ಗಜೇಂದ್ರ ಸಿಂಗ್ ನನ್ನು ಪ್ರೇರೇಪಿಸಿದ್ದಾರೆ ಎಂದು ದೆಹಲಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ದೆಹಲಿ ಪೊಲೀಸ್ ವರದಿ ನೀಡುವುದಕ್ಕೂ ಮುನ್ನ ರೈತನ ಆತ್ಮಹತ್ಯೆ ಪ್ರಕರಣದ ಬಗ್ಗೆ ಟಿ.ವಿ ಚರ್ಚೆಗಳಲ್ಲಿ ಕಣ್ಣೀರಿಡುತ್ತಿದ್ದ ಆಪ್ ಪಕ್ಷದ ಮುಖಂಡರಿಗೆ ಈಗ ತೀವ್ರ ಮುಖಭಂಗ ಉಂಟಾಗಿದೆ.