ನವದೆಹಲಿ : ರೈತರ ರಕ್ತದಿಂದ ನಮ್ಮ ದೇಶ ಕಟ್ಟಲಾಗಿದೆ. ಆದರೆ ಇಂದು ದೇಶದ ರೈತರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಆತಂಕದಿಂದ ದಿನಕಳೆಯುವಂತಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ಭೂಸ್ವಾಧೀನ ಕಾಯ್ದೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಬೃಹತ್ ಕಿಸಾನ್ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರದ ವಿರುದ್ಧ ಕಿಡಿಕಾರಿದರು. ಕೇಂದ್ರ ಸರ್ಕಾರ ರೈತರನ್ನು ಮರೆತಿದೆ. ರಾತ್ರಿ ಮಲಗಿ ಬೆಳಗಾಗುವಷ್ಟರಲ್ಲಿ ಏನಾಗುತ್ತದೋ ಗೊತ್ತಿಲ್ಲ, ಎಲ್ಲಿ ಯಾರು ಜಮಿನು ಕಳೆದುಕೊಳ್ಳುತ್ತಾರೊ ಎಂಬ ಭೀತಿಯಲ್ಲಿ ಬದುಕುವಂತಾಗಿದೆ, ಇಂದು ರೈತರು ಭಯಭೀತರಾಗಿದ್ದಾರೆ, ದೇಶದ ರೈತರಲ್ಲಿ ಇಂಥಹ ಒಂದು ಭಾವನೆ ಮನೆ ಮಾಡಿದೆ ಎಂದರು.
ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ದಿನೋಪಯೋಗಿ ವಸ್ತುಗಳು ಕಡಿಮೆ ಬೆಲೆಗೆ ಸಿಗುವಂತೆ ಮಾಡಿದೆವು. ರೈತರಿಗೆ ಯುಪಿಎ ಸರ್ಕಾರದಿಂದ ಪ್ಯಾಕೆಜ್ ಘೋಷಣೆ ಮಾಡಿದ್ದೆವು. ರೈತರ ಸಾಲ ಮನ್ನಾ ಮಾಡಿದೆವು. ಆದರೆ ಇಂದು ಬಡವರ ಉದ್ದಾರ ಮಾಡುತ್ತೇವೆ ಎಂದು ಎನ್.ಡಿ.ಎ ಸರ್ಕಾರ ಹೇಳುತ್ತಿದೆ. ಆದರೆ ಬಡವರಿಗಾಗಿ ಮೋದಿ ಸರ್ಕಾರ ಏನನ್ನೂ ಕೊಡುತ್ತಿಲ್ಲ. ಉದ್ಯಮಿಗಳ ಪರ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಹಿಂದೂಸ್ತಾನದ ಪ್ರಧಾನಿಯಾಗಿದ್ದಾರೆ. ಆದರೆ ಅವರು ಗುಜರಾತ್ ಪ್ರಧಾನಿಯಂತೆ ವರ್ತಿಸುತ್ತಿದ್ದಾರೆ. ದೇಶದ 50ವರ್ಷಗಳ ಗಲೀಜು ಸ್ವಚ್ಛಗೊಳಿಸುವುದಾಗಿ ಮೋದಿ ವಿದೇಶಗಳಿಗೆ ಹೋದಾಗ ಹೇಳಿಕೆ ನೀಡುತ್ತಿದ್ದಾರೆ. ಇಂಥಹ ಹೇಳಿಕೆಗಳು ಮೋದಿಗೆ ಶೋಭೆ ತರುವುದಿಲ್ಲ. ಪ್ರಧಾನಿ ಹುದ್ದೆಗೂ ಇದು ಶೋಭೆಯಲ್ಲ ಎಂದು ಹೇಳಿದರು.
ಒಮ್ಮೆ ನಾನು ಆಸ್ಟ್ರೇಲಿಯಾ ದೇಶಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಪ್ರಪಂಚದಲ್ಲೇ ಪ್ರಸಿದ್ಧವಾದ ಗಣಿ ಪ್ರದೇಶಗಳಿಗೆ ಭೇಟಿ ನೀಡಿದ್ದೆ. ಆಗ ಸಾವಿರಾರು ಎಕರೆ ಪ್ರದೇಶದಲ್ಲಿ ಗಣಿ ಕೆಲಸ ನಡೆಯುತ್ತಿತ್ತು. ಅಲ್ಲಿನ ಜಮೀನು ಯಾರಿಗೆ ಸೇರಿದ್ದು ಎಂದು ವಿಚಾರಿಸಿದೆ. ಜಾಗ ಕೊಟ್ಟವರೂ ಶ್ರೀಮಂತರಿರಬಹುದು, ಐಶಾರಾಮಿ ಜೀವನ ನಡೆಸುತ್ತಿರಬಹುದು ಎಂದು ನಾನು ಭಾವಿಸಿದ್ದೆ. ಆದರೆ ನನ್ನ ಯೋಚನೆ ಸುಳ್ಳಾಗಿತ್ತು. ಆ ಜಮೀನು 300 ಕುಟುಂಬದವರದಾಗಿತ್ತು. ಜಮೀನು ನೀಡಿದವರೆಲ್ಲಾ ಕಡುಬಡವರಾಗಿದ್ದರು. ಭಾರತ ಸರ್ಕಾರವೂ ಇದನ್ನೇ ಮಾಡುವ ಪ್ಲಾನ್ ಮಾಡಿದೆ. ಭೂಸ್ವಾಧೀನ ಕಾಯ್ದೆ ಜಾರಿಗೆ ಬಂದರೆ ದೇಶದ ರೈತರ ಸ್ಥಿತಿಯೂ ಇದೇ ಆಗಲಿದೆ ಎಂದು ಎಚ್ಚರಿಕೆ ನೀಡಿದರು.