ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತ ಮತ್ತು ಬಡವರ ವಿರೋಧಿ ಸರ್ಕಾರವಾಗಿದ್ದು ಇದು ಕೇವಲ ಉದ್ಯಮಿಗಳ ಪರವಾದ ಸರ್ಕಾರವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಾಗ್ಧಾಳಿ ನಡೆಸಿದ್ದಾರೆ.
ಭೂಸ್ವಾಧೀನ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತರುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಆಯೋಜಿಸಿದ ಬೃಹತ್ ಕಿಸಾನ್ ರ್ಯಾಲಿ ಯಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ನನಗೆ ಗೊತ್ತಿದೆ ಇದು ಬೆಳೆ ಕಟಾವು ಮಾಡುವ ಸಮಯ, ಆದರೂ ಇಷ್ಟೊಂದು ಸಂಖ್ಯೆಯಲ್ಲಿ ನೀವು ಇಲ್ಲಿ ಸೇರಿದ್ದಿರಿ ನಿಮಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಮೋದಿ ಸರ್ಕಾರವು ರೈತರ ಗಾಯಕ್ಕೆ ಉಪ್ಪು ಹಾಕುವ ಕೆಲಸ ಮಾಡುತ್ತಿದೆ. ಅತಿವೃಷ್ಟಿಯಿಂದ ಲಕ್ಷಾಂತರ ಹೆಕ್ಟೇರ್ ಬೆಳೆ ಹಾನಿಯಾಗಿದೆ ಆದರೆ ಮೋದಿ ಸರ್ಕಾರ ಕೈಕಟ್ಟಿ ಕುಳಿತಿದೆ ಎಂದು ಆರೋಪಿಸಿದರು.
ನಾವು ಇಲ್ಲಿ ಸೇರಿರುವುದು ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು, ರೈತರ ಧ್ವನಿ ಅಡಗಿಸಲು ನಿಮಗೆ ಸಾಧ್ಯವಿಲ್ಲ, ಆದು ಅಡಗುವುದು ಇಲ್ಲ ಎಂದರು. ರೈತರನ್ನು ಜೀತದಾಳುಗಳನ್ನಾಗಿಸಲು ಕಾಂಗ್ರೆಸ್ ಬಿಡುವುದಿಲ್ಲ ಎಂದು ಗುಡುಗಿದರು.